ಕೆರಗೋಡು: ಹಳ್ಳಿಯಲ್ಲಿ ಯಾವ ವೃತ್ತಿ ಮಾಡಿದರೂ ಆದಾಯವಿಲ್ಲ ಎಂದು ಭಾವಿಸಿರುವ ಗ್ರಾಮೀಣ ಭಾಗದ ಜನರು ನಗರಕ್ಕೆ ಗುಳೇ ಹೊರಟಿರುವ ಈ ಸಂದರ್ಭದಲ್ಲಿ ಇಲ್ಲೊಬ್ಬರು ಹಳ್ಳಿಯಲ್ಲಿ ದ್ದುಕೊಂಡೇ ಸ್ವಾವಲಂಬಿ ಜೀವನ ಕಂಡುಕೊಂಡಿದ್ದಾರೆ. ಸಿಹಿ ತಿನಿಸು ತಯಾರಿಸಿ, ಮಾರಾಟ ಮಾಡುತ್ತಿರುವ ಮಂಡ್ಯ ತಾಲ್ಲೂಕಿನ ಬಾಳೇನಹಳ್ಳಿ ಗ್ರಾಮದ ಸೋಮಶೇಖರ್ ಗ್ರಾಮೀಣ ಜನರಿಗೆ ಮಾದರಿಯಾಗಿದ್ದಾರೆ.
ಇವರ ಕೈ ರುಚಿ ಈ ಭಾಗದ ಜನರಲ್ಲಿ ಮನೆಮಾತು. ಇವರ ಕೈಯಿಂದ ತಯಾರಾಗುವ ಶುಚಿ ರುಚಿಯಾದ ತಿನಿಸುಗಳನ್ನು ಸೇವಿಸಿದರೆ, ಮತ್ತೊಮ್ಮೆ, ಮಗದೊಮ್ಮೆ ತಿನ್ನಬೇಕು ಎನ್ನುವ ಆಸೆಯಾಗುತ್ತದೆ. ಈ ನಿಟ್ಟಿನಲ್ಲಿ ಬಸರಾಳು ಸುತ್ತಮುತ್ತಲ ಗ್ರಾಮಗಳ ಶಾಲೆಗಳಲ್ಲಿ, ಮದುವೆ, ಮುಂಜಿ, ಶುಭ ಸಮಾರಂಭ ಹಾಗೂ ದೇವಸ್ಥಾನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸೋಮಶೇಖರ್ ತಯಾರಿಸುವ ಸಿಹಿ ತಿನಿಸು ಇರಬೇಕು. ಇನ್ನೂ ಕೆಲವರು ಸೋಮಶೇಖರ್ ಮನೆಗೆ ಹೋಗಿ ತಿನಿಸುಗಳ ರುಚಿ ನೋಡಿ ಬೇಕಾದ ತಿನಿಸುಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಾರೆ.
ಸೋಮಶೇಖರ್ ಅವರು ಏಳನೇ ತರಗತಿ ಓದುತ್ತಿದ್ದಾಗಲೇ ಮೈಸೂರಿಗೆ ತೆರಳಿ ಟೀ ಅಂಗಡಿ ಮತ್ತು ಹೋಟೆಲ್ಗೆ ಕೆಲಸಕ್ಕೆ ಸೇರಿದ್ದರು. ಬಳಿಕ ರಾಧಿಕಾ ಹೋಟೆಲ್, ನ್ಯೂ ಬಾಂಬೆ ಟಿಫಾನಿಸ್, ಅರುಣಾ ಹೋಟೆಲ್ ಜತೆಗೆ ಬೆಂಗಳೂರು, ಮದ್ದೂರು, ಮಂಡ್ಯ, ಭಾರತೀನಗರ, ನಾಗಮಂಗಲ, ಕೊಣನೂರು ಸೇರಿದಂತೆ ಹಲವು ಕಡೆ ಸಹಾಯಕರಾಗಿ ಕೆಲಸ ಮಾಡಿದ್ದರು. ಅಲ್ಲಿ ಸಿಹಿ ತಿನಿಸನ್ನು ತಯಾರಿಸುವ ಬಗೆಯನ್ನು ನೋಡುತ್ತಲೇ ಕಲಿತಿದ್ದರು.
ಇದೇ ವೇಳೆಗೆ ಮಗ ಅನಾರೋಗ್ಯಕ್ಕೆ ತುತ್ತಾಗಿ ವೈದ್ಯರಿಗೆ ತೋರಿಸಲು ಅನಿವಾರ್ಯವಾಗಿ ಗ್ರಾಮಕ್ಕೆ ಬಂದ ಅವರು, ಇಲ್ಲೇ ಉಳಿದುಕೊಂಡು ಬದುಕು ಕಟ್ಟಿಕೊಂಡರು. ಅದಕ್ಕೆ ಪತ್ನಿ ಭಾಗ್ಯಮ್ಮ ಅವರೂ ಸಹಕಾರ ನೀಡಿದ್ದರು.
ತರಹೇವಾರಿ ಸಿಹಿ ತಿನಿಸುಗಳು
ಜಹಾಂಗೀರ್, ಮೈಸೂರು ಪಾಕ್, ಲಡ್ಡು, ಬಾದಶಹ, ಬಾದಾಮಿ ಪುರಿ, ಬೂಂದಿ, ಖಾಜೂ ಬರ್ಫಿ, ಜಿಲೇಬಿ, ಚಂಪಾಕಲಿ, ಚಂಚಂ, ಪೇಡ,
ಹಾಲಿನ ಉತ್ಪನ್ನಗಳಾದ ಚಾಕೋಲೆಟ್, ಮಿಲ್ಕ್ ಬರ್ಫಿ, ಗ್ರೀನ್ ಬರ್ಫಿ, ಫ್ರೂಟ್ ಬರ್ಫಿ, ಗ್ರೀನ್ ಬರ್ಫಿ, ರಾಜಭೋಗ್, ಮಿಲ್ಬಾರ್, ರಸ್ಮಾಲಾಯಿ, ಬಾಸುಂಡಿ ಸೇರಿ ಹತ್ತಾರು ಸಿಹಿ ಉತ್ಪನ್ನಗಳನ್ನು ಸೋಮಶೇಖರ್ ಅವರು ಅಚ್ಚುಕಟ್ಟಾಗಿ ತಯಾರಿಸುತ್ತಾರೆ. ಉತ್ತಮ ಗುಣಮಟ್ಟದ ಸಿಹಿಯ ಜತೆಗೆ ಖಾರ ಬೂಂದಿ, ಮಿಕ್ಸ್ ಖಾರ, ಬಾಂಬೆ ಖಾರ, ಕಡಲೆಬೀಜ, ಮಸಾಲೆ ಕಡಲೆ
ಬೀಜ, ಗೋಡಂಬಿ ಮಿಕ್ಸ್, ಕಡ್ಡಿ ಖಾರ, ಕಾಂಗ್ರೆಸ್ ಖಾರದ ತಿನಿಸು ತಯಾರಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.