ಶ್ರೀರಂಗಪಟ್ಟಣ: ಪಟ್ಟಣದಲ್ಲಿ, ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುವ ತಾಣದಲ್ಲಿ ಅ.6ರಂದು ನವರಾತ್ರಿ ವೈಭವ ಪ್ರಾಯೋಗಿಕವಾಗಿ ಆರಂಭವಾಗಲಿದ್ದು, ಅ.10ರಿಂದ ವರ್ಷದ 365 ದಿನಗಳೂ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಇನೋವೇಟಿವ್ ಲೈಟಿಂಗ್ ಸಿಸ್ಟಂ ಸಂಸ್ಥೆ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದೆ. ಮೈಸೂರು ಮತ್ತು ಶ್ರೀರಂಗಪಟ್ಟಣದ ಗತ ವೈಭವ ತಿಳಿಸುವ ಕಾರ್ಯಕ್ರಮ ಇದಾಗಿದೆ. ಪ್ರತಿ ದಿನ ಸಂಜೆ 7ರಿಂದ 7.40ರ ವರೆಗೆ ಪ್ರದರ್ಶನಗೊಳ್ಳಲಿದೆ. ಮೈಸೂರು, ಮಡಿಕೇರಿಗೆ ಬರುವ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಲಾಗುವುದು. ಶ್ರೀರಂಗಪಟ್ಟಣ ಪ್ರವಾಸಿ ತಾಣಗಳನ್ನು ಪರಿಚಯಿಸುವ, ಇಲ್ಲಿನ ಪರಂಪರೆಯ ಪ್ರಚಾರ ಮಾಡುವ ಕುರಿತು ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.
ಇನೋವೇಟಿವ್ ಲೈಟಿಂಗ್ಸ್ ಸಿಸ್ಟಂನ ಮುಖ್ಯಸ್ಥ ಕೃಷ್ಣಕುಮಾರ್ ಮಾತನಾಡಿ, ‘ದೇಶದ ಇತಿಹಾಸದಲ್ಲೇ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು. ನಮ್ಮ ಸಂಸ್ಥೆ ಇದನ್ನು ಟೆಂಡರ್ ಪಡೆದಿದ್ದು, 5 ವರ್ಷಗಳವರೆಗೆ ಇದನ್ನು ನಿರ್ವಹಿಸಲಿದೆ. ನವರಾತ್ರಿ ವೈಭವದ ಜತೆಗೆ ಧ್ವನಿ ಬೆಳಕು ಕಾರ್ಯಕ್ರಮ ಕೂಡ ನಡೆಯಲಿದೆ. ಸದ್ಯ ಕನ್ನಡದಲ್ಲಿ ಕಾರ್ಯಕ್ರಮ ಬಿತ್ತರವಾಗುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಇಂಗ್ಲಿಷ್ ಅವತರಣಿಕೆ ಕೂಡ ಹೊರ ಬರಲಿದೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಯಾಲಕ್ಕಿ ಗೌಡ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹರೀಶ್, ಉಪ ವಿಭಾಗಾಧಿಕಾರಿ ಶೈಲಜಾ, ನಿರ್ಮಿತ ಕೇಂದ್ರದ ಯೋಜನಾ ನಿರ್ದೇಶಕ ನರೇಶ್, ವಾಸು ದೀಕ್ಷಿತ್ ಇದ್ದರು.
ಇಲ್ಲಿನ ಪರಂಪರೆಯ ಪರಿಚಯ
‘ಪ್ರವಾಸಿಗರು ಮತ್ತು ಯುವಕರಿಗೆ ಇಲ್ಲಿನ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ನವರಾತ್ರಿ ವೈಭವ ಶುರುವಾಗುತ್ತಿದೆ. ಶಾಶ್ವತ ಕಾರ್ಯಕ್ರಮ ರೂಪಿಸಿ ರಾಷ್ಟ್ರದ ಆಸ್ತಿಯನ್ನಾಗಿ ರೂಪಿಸುವ, ಪಟ್ಟಣದ ಹೆಸರನ್ನು ದೇಶ, ವಿದೇಶಗಳಿಗೂ ವಿಸ್ತರಿಸುವ ಉದ್ದೇಶ ನಮ್ಮದು’ ಎಂದು ರಂಗಕರ್ಮಿ ಟಿ.ಎಸ್.ನಾಗಾಭರಣ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.