ನಾಗಮಂಗಲ: ತಾಲ್ಲೂಕಿನ ಕಾಳಿಂಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೈಗಾರಿಕಾಭಿವೃದ್ಧಿ ಮಾಡಲು ಭೂಮಿ ವಶಪಡಿಸಿಕೊಂಡಿರುವುದನ್ನು ಕೈ ಬಿಡುವಂತೆ ಆಗ್ರಹಿಸಿ ಅ.5 ರಂದು ಹಮ್ಮಿಕೊಳ್ಳಲಾಗಿರುವ ಹೆದ್ದಾರಿ ಬಂದ್ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಮತ್ತು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ರೈತ ಸಂಘದ ಮುಖಂಡರು ತಿಳಿಸಿದರು.
ತಾಲ್ಲೂಕಿನ ಹಟ್ನ, ಬಿಳಗುಂದ, ಕಾಳಿಂಗನಹಳ್ಳಿ, ಗರುಡನ ಹಳ್ಳಿಗಳಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಭೂಮಿಯನ್ನು ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ರೈತರ ಪರವಾಗಿ ರೈತಸಂಘ, ಹಸಿರು ಸೇನೆ ಕಾರ್ಯಕರ್ತರು ಅ. 5 ರಂದು ಹೆದ್ದಾರಿ ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗರುಡನಹಳ್ಳಿ ಗ್ರಾಮಕ್ಕೆ ಗುರುವಾರ ರಾತ್ರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ರೈತ ಮುಖಂಡರೊಂದಿಗೆ ಶಾಂತಿಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಬೆಳ್ಳೂರು ಠಾಣೆಯ ಪಿಎಸ್ಐ ದಯಾನಂದ್, ಹೆದ್ದಾರಿಯನ್ನು ಬಂದ್ ಮಾಡಿದಲ್ಲಿ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ಹೇಳಿದರು.
ಆದರೆ ಗ್ರಾಮದ ಮುಖಂಡರು ಹೆದ್ದಾರಿ ಬಂದ್ ವೇಳೆ ಯಾವುದೇ ಅಹಿತಕರ ನಡೆಯದಂತೆ ಪೊಲೀಸರಿಗೆ ಸಹಕರ ನೀಡುತ್ತೇವೆ ಎಂದು ಭರವಸೆ ನೀಡಿದರು. ಶಾಸಕರು ಸಹ ಅಂದು ನಮ್ಮೊಂದಿಗೆ ಕೈ ಜೋಡಿಸಿದರೆ ಹೆಚ್ಚಿನ ಬಲ ದೊರೆತಂತಾಗುತ್ತದೆ ಎಂದರು. ಹೆದ್ದಾರಿ ಬಂದ್ ಮಾಡುವ ಬಗ್ಗೆ ಮುಖಂಡರು ಒಕ್ಕೊರಲಿನಿಂದ ತೀರ್ಮಾನ ಕೈಗೊಂಡರು.
ದಯಾನಂದ್ ಹೆದ್ದಾರಿ ಬಂದ್ ಕೈಬಿಡುವಂತೆ ಮನವೊಲಿಸಲು ಪ್ರಯತ್ನಿಸಿದರೂ ಸಹ ಮುಖಂಡರು ಶಾಂತಿಯುತವಾಗಿ ಬಂದ್ ನಡೆಸುತ್ತೇವೆ ಎಂದು ಭರವಸೆ ನೀಡಿದ ನಂತರ ಅಲ್ಲಿಂದ ತೆರಳಿದರು. ರೈತ ಮುಖಂಡರಾದ ಗಿರೀಗೌಡ, ಲಕ್ಷ್ಮಣಗೌಡ, ನಾಗರಾಜು, ರಜನಿ, ಶಿವಕುಮಾರ್, ಲಕ್ಷ್ಮಣ್, ಚಿಕ್ಕಣ್ಣ, ನಂಜೇಗೌಡ, ಪ್ರಶಾಂತ್, ಶಾಂತರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.