ನಾಗಮಂಗಲ: ತಾಲ್ಲೂಕಿನ ತಾಲ್ಲೂಕಿನ ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿ. ಶ್ರೀರಾಮನಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲೇ ಗ್ರಾಮದ ಹಲವು ಜನರು ಕಸ ಹಾಗೂ ಸೆಗಣಿಯನ್ನು ಹಾಕಿ ತಿಪ್ಪೆಗಳನ್ನು ನಿರ್ಮಿಸಿದ್ದಾರೆ. ಮಕ್ಕಳು ಶಾಲೆಯಿಂದ ಹೊರಬಂದರೆ ಮೂಗು ಮುಚ್ಚಿಕೊಂಡು ಹೋಗಬೇಕಿದೆ.
ಶಾಲೆಯ ಸುತ್ತ ಸುಮಾರು 25 ತಿಪ್ಪೆಗುಂಡಿ ಹಾಕಲಾಗಿದ್ದು ಶಾಲೆಯ ಆವರಣವೆಲ್ಲಾ ದುರ್ನಾತ ಬೀರುವ ಜೊತೆಗೆ ಸ್ವಚ್ಛತೆ ಹಾಳಾಗಿ ಸೊಳ್ಳೆಗಳು ಹೆಚ್ಚಾಗಿದೆ. ಇದರಿಂದ ಓದುತ್ತಿರುವ 40 ವಿದ್ಯಾರ್ಥಿಗಳು ಇನ್ನಿಲ್ಲದ ಹಿಂಸೆ ಪಡುವಂತಾಗಿದೆ.
ತಿಪ್ಪೆಗಳನ್ನು ಹಾಕಲಾಗಿರುವ ಜಾಗಕ್ಕೆ ಹೊಂದಿಕೊಂಡಂತೆ ಶಾಲೆ, ದೇವಾಲಯ ಮತ್ತು ಅಂಗನವಾಡಿ ಕೇಂದ್ರಗಳಿದ್ದರೂ ಸ್ವಚ್ಛತೆಯನ್ನು ಜನರು ಕಡೆಗಣಿಸಿದ್ದಾರೆ. ಇಷ್ಟಾದರೂ ಗ್ರಾಮದ ಜನರಿಗೆ ಶಾಲೆಯ ಶಿಕ್ಷಕರು ಮನವರಿಗೆ ಮಾಡಿದರೂ, ‘ನಮ್ಮ ಜಾಗದಲ್ಲಿ ಕಸ ಹಾಕಿದ್ದೇವೆ’ ಎಂದು ಹೇಳುವ ಕೆಲವರು ಶಾಲೆಯ ಕಿಟಕಿ ಮತ್ತು ಕಂಬಗಳಿವೆ ಎಮ್ಮೆ– ಕರುಗಳನ್ನು ಕಟ್ಟುತ್ತಾರೆ.
‘ಗ್ರಾಮ ಪಂಚಾಯಿತಿಗೆ ಈ ಸಂಬಂಧ ದೂರು ನೀಡಿ ಮೂರು ತಿಂಗಳೇ ಕಳೆದಿವೆ. ಆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಊರಿನ ಜನರೂ ಸಹ ಸಹಕರಿಸುವುದಿಲ್ಲ. ಇದರಿಂದಾಗಿ ಶಾಲೆಯ ವಾತಾವರಣವೇ ಹಾಳಾಗಿದೆ. ಊರಿನ ಜನರೆಲ್ಲಾ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಗ್ರಾಮಸ್ಥ ಪ್ರಕಾಶ್ ಹೇಳಿದರು.
‘ಜಾಗ ಯಾರದಾದರೇನು ಶಾಲೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಆದ್ದರಿಂದ ಶಾಲೆಯ ವಾಸ್ತವ ಪರಿಸ್ಥಿತಿಯನ್ನು ಕುರಿತು ಸ್ಥಳ ಪರಿಶೀಲನೆ ನಡೆಸಲು ಬಿಇಒ ಅವರಿಗೆ ತಿಳಿಸುತ್ತೇನೆ. ಅಲ್ಲದೇ ಪಿಡಿಒ ಅವರಿಂದ ಮಾಹಿತಿ ಪಡೆದು ಅಗತ್ಯ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸುತ್ತೇನೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.