ಬೆಳಕವಾಡಿ: ಒಂದು ವರ್ಷದ ಅವಧಿಯಲ್ಲಿ ನರೇಗಾ ಯೋಜನೆಯಡಿ ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಅನುಷ್ಠಾನವಾಗಿದೆ ಎಂಬುದನ್ನು ಸಾರ್ವಜನಿಕರ ಮುಂದೆ ಪ್ರಚುರ ಪಡಿಸುವುದು ಗ್ರಾಮ ಸಭೆಯ ಉದ್ದೇಶವಾಗಿದೆ ಎಂದು ತಾಲ್ಲೂಕು ಸಾಮಾಜಿಕ ಲೆಕ್ಕ ಪರಿಶೋಧನೆ ಸಂಯೋಜಕ ಎನ್.ಪಿ.ಮಹೇಶ್ ತಿಳಿಸಿದರು.
ಬೆಳಕವಾಡಿ ಸಮೀಪದ ಕಗ್ಗಲೀಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆದ ನರೇಗಾ ಯೋಜನೆ ಮತ್ತು 15 ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಹಾಗೂ ಪ್ರಧಾನ ಮಂತ್ರಿ ಆದರ್ಶ ಯೋಜನೆಯ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಪಿಡಿಒ ಜಯಸ್ವಾಮಿ ಮಾತನಾಡಿ, ಕಗ್ಗಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳದಾಸನಹಳ್ಳಿ ಗ್ರಾಮ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಲ್ಲಿ ಆಯ್ಕೆಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ನರೇಗಾ ಯೋಜನೆಯಡಿ ತಯಾರಿಸಿರುವ ವಿವಿಧ 42 ಕಾಮಗಾರಿಗಳ ಅನುಷ್ಠಾನದ ಪಟ್ಟಿಯನ್ನು ಸಂಪನ್ಮೂಲ ವ್ಯಕ್ತಿ ಶ್ವೇತಾ ಮಂಡಿಸಿದರು.
‘ವಾಸುವಳ್ಳಿ ಗ್ರಾಮದ ದೊಡ್ಡಕೆರೆ ಒತ್ತುವರಿಯಾಗಿದೆ. ಕೆರೆಯ ರಸ್ತೆ ಕಿರಿದಾಗಿದ್ದು, ಕೆರೆ ಹೂಳು ತೆಗೆದು ಹೊರ ಹಾಕದೆ ಅಲ್ಲಿಯೇ ಹಾಕಿದ್ದು, ಕೆರೆ ಚಿಕ್ಕದಾಗಿದೆ. ಜನರಿಗೆ ಅಗತ್ಯ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮಾಡಿಲ್ಲ. ಪಂಚಾಯಿತಿಯಲ್ಲಿ ನರೇಗಾ ಮತ್ತು 15ನೇ ಹಣಕಾಸು ಯೋಜನೆಯಡಿ ಬಾರಿ ಅವ್ಯವಹಾರ ನಡೆದಿದೆ. ನನ್ನಲ್ಲಿ ದಾಖಲೆ ಇದ್ದು, ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆ’ ಎಂದು ಉಪಾಧ್ಯಕ್ಷ ಎಚ್.ಎನ್.ರಾಜಶೇಖರ್ ಮೂರ್ತಿ, ಮಲ್ಲಿಕಾರ್ಜುನ, ವೃಷಬೇಂದ್ರ, ಮಹೇಶ್ ಆರೋಪಿಸಿದರು.
ಪಿಡಿಒ ಜಯಸ್ವಾಮಿ ಮಾತನಾಡಿ, ‘ವಾಸುವಳ್ಳಿ ಬೀರೇಶ್ವರ ದೇವಸ್ಥಾನದ 14.13 ಗುಂಟೆ ಆರ್.ಟಿ.ಸಿ ಜಮೀನಿನಲ್ಲಿ ಕೆರೆ ಸೇರಿಕೊಂಡಿದೆ. ಕೆರೆ ಒತ್ತುವರಿ ಬಗ್ಗೆ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಿ ಕೆರೆ ಗುರುತಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ನನ್ನ ಅವಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ನಾನು ಎರಡು ತಿಂಗಳಿಂದ ಪ್ರಭಾರ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ’ ಎಂದು ಉತ್ತರಿಸಿದರು.
ಸಭೆಯ ನೋಡಲ್ ಅಧಿಕಾರಿಯಾಗಿ ಹಿರಿಯ ನಾಗರಿಕ ಶಂಕರಪ್ಪ, ಗ್ರಾ.ಪಂ.ಅಧ್ಯಕ್ಷೆ ವರಮಹಾಲಕ್ಷ್ಮಿ, ಸದಸ್ಯರಾದ ಕೆ.ಎಸ್.ರಾಜೇಂದ್ರ ಪ್ರಸಾದ್, ಮಹದೇವಯ್ಯ, ಸೊಸೈಟಿ ನಿರ್ದೇಶಕರಾದ ಮಹೇಶ್, ಬಿ.ಕೆ.ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಕಾಳಪ್ಪ ಪಾಲ್ಗೊಂಡಿದ್ದರು.
42 ಕಾಮಗಾರಿಗಳ ಅನುಷ್ಠಾನದ ಪಟ್ಟಿ ಮಂಡನೆ ವಾಸುವಳ್ಳಿ ಗ್ರಾಮದ ದೊಡ್ಡಕೆರೆ ಒತ್ತುವರಿ: ಆರೋಪ ಕೆರೆ ಒತ್ತುವರಿ ಬಗ್ಗೆ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.