ADVERTISEMENT

ಮಂಡ್ಯ | ಒಂದು ಸಾವು: 163 ಮಂದಿಗೆ ಕೋವಿಡ್‌ ದೃಢ

3,179ಕ್ಕೆ ಏರಿಕೆಯಾದ ಒಟ್ಟು ರೋಗಿಗಳ ಸಂಖ್ಯೆ, 1387 ಪ್ರಕರಣ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 16:28 IST
Last Updated 14 ಆಗಸ್ಟ್ 2020, 16:28 IST
   

ಮಂಡ್ಯ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕಿನ ವ್ಯಕ್ತಿಯೊಬ್ಬರು ಕೋವಿಡ್‌–19ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೋವಿಡ್‌ನಿಂದ 32 ಮಂದಿ ಮೃತಪಟ್ಟಿದ್ದಾರೆ.

77,089ನೇ ರೋಗಿ ಅಧಿಕ ರಕ್ತದೊತ್ತಡ, ಜ್ವರ, ಮಧುಮೇಹದಿಂದ ಬಳಲುತ್ತಿದ್ದರು. ತೀವ್ರ ಉಸಿರಾಟದ ತೊಂದರೆಯಿಂದಾಗಿ ಅವರಿಗೆ ವೆಂಟಿಲೇಟರ್‌ ಮೂಲಕ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಶುಕ್ರವಾರ ಕೋವಿಡ್ ಕಾರ್ಯಸೂಚಿ ಅನ್ವಯ ಅಂತ್ಯಕ್ರಿಯೆ ನೆರವೇರಿಸಲಾಯಿತು.

163 ಮಂದಿಗೆ ಸೋಂಕು: ಶುಕ್ರವಾರ ಒಂದೇ ದಿನ 163 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 3,179ಕ್ಕೆ ಏರಿಕೆಯಾಗಿದೆ.

ADVERTISEMENT

ಮಂಡ್ಯ ತಾಲ್ಲೂಕಿನ 63 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅವರಲ್ಲಿ 12 ಮಂದಿಗೆ ರೋಗ ಲಕ್ಷಣ ಪತ್ತೆಯಾಗಿದೆ. ಮದ್ದೂರು ತಾಲ್ಲೂಕಿನ 34 ಸೋಂಕಿತರ ಪೈಕಿ 7 ಮಂದಿಗೆ ರೋಗ ಲಕ್ಷಣ ಕಂಡು ಬಂದಿದೆ. ಪಾಂಡವಪುರ ತಾಲ್ಲೂಕಿನ 22 ಮಂದಿಯಲ್ಲಿ ಕೋವಿಡ್‌–19 ಪತ್ತೆಯಾಗಿದೆ. ಅವರಲ್ಲಿ 7 ಮಂದಿಗೆ ಶೀತ ಜ್ವರ ಕಾಣಿಸಿಕೊಂಡಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನ 9 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಬ್ಬರಲ್ಲಿ ಲಕ್ಷಣ ಕಂಡು ಬಂದಿದೆ. ಕೆ.ಆರ್‌.ಪೇಟೆ 6, ನಾಗಮಂಗಲ ತಾಲ್ಲೂಕಿನ ಐವರಲ್ಲಿ ಸೋಂಕು ಪತ್ತೆಯಾಗಿದೆ. ಮೈಸೂರು ಜಿಲ್ಲೆಯ ವ್ಯಕ್ತಿಯೊಬ್ಬರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು ಸೋಂಕಿತರಲ್ಲಿ 1759 ಮಂದಿ ಗುಣಮುಖರಾಗಿದ್ದಾರೆ. 1387 ಪ್ರಕರಣಗಳು ಸಕ್ರಿಯವಾಗಿವೆ.

ಜಿಲ್ಲೆಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಮಿಮ್ಸ್ ಆಸ್ಪತ್ರೆ, ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧೆಡೆ ಪರೀಕ್ಷ ಕಿಯೋಸ್ಕ್‌ ಮೂಲಕ ಪರೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ಆಂಟಿಜೆನ್‌ ಕಿಟ್‌ಗಳ ಮೂಲಕವೂ ಪರೀಕ್ಷೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಜನರು ಆತಂಕ ಪಡುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕು. ಅಂತರ ಕಾಯ್ದುಕೊಳ್ಳಲು ಆದ್ಯತೆ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕೋವಿಡ್‌ ಅಂಕಿ–ಅಂಶ

ಜಿಲ್ಲೆಯಲ್ಲಿ ಒಟ್ಟು: 3,179

ಸಕ್ರಿಯ ಪ್ರಕರಣ: 1,387

ಏರಿಕೆ: 163

ಗುಣಮುಖ: 1759

ಏರಿಕೆ: 0

ಸಾವು: 32

ಏರಿಕೆ: 01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.