ಶ್ರೀರಂಗಪಟ್ಟಣ: ಪಟ್ಟಣದ ರಾಂಪುರ ಸಂಪರ್ಕ ಸೇತುವೆ ಬಳಿ, ಕಾವೇರಿ ನದಿಯಲ್ಲಿ ನೀರುನಾಯಿಗಳ ಬೇಟೆಗೆ ಬೋನು ಇರಿಸಿದ್ದರು ಎಂಬ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸಂಜೆ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ಗಸ್ತು ಅರಣ್ಯಪಾಲಕ ಬಸವರಾಜ್ ಮತ್ತು ಅರಣ್ಯ ವೀಕ್ಷಕ ತುಳಿಸಿಕುಮಾರ್ ಸ್ಥಳಕ್ಕೆ ತೆರಳಿ, ಸಮೀಪದ ಗಂಜಾಂ ನಿವಾಸಿ ರವಿ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ರವಿ ಅವರ ಬಳಿ ಇದ್ದ 5 ಬೋನುಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೂಲಂಕಷ ತನಿಖೆಯ ಬಳಿಕ ವಾಸ್ತವ ಸಂಗತಿ ತಿಳಿಯಲಿದೆ’ ಎಂದು ಉಪ ವಲಯ ಅರಣ್ಯಾಧಿಕಾರಿ ಬಿ.ಎಂ. ನಾಗರಾಜ್ ತಿಳಿಸಿದ್ದಾರೆ.
‘ಕಾವೇರಿ ನದಿಯಲ್ಲಿ ಮೀನು ಹಿಡಿಯಲು ಬೋನು ಇರಿಸಲಾಗಿತ್ತು. ನೀರುನಾಯಿ ಹಿಡಿಯಲು ಇಟ್ಟಿಲ್ಲ’ ಎಂದು ರವಿ ವಿಚಾರಣೆ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
‘ಪಟ್ಟಣದ ಸುತ್ತಮುತ್ತ ಕಾವೇರಿ ನದಿಯಲ್ಲಿ ಹಲವು ದಿನಗಳಿಂದ ನೀರುನಾಯಿಗಳ ಬೇಟೆ ನಡೆಯುತ್ತಿದೆ. ಅಳಿವಿನ ಅಂಚಿನಲ್ಲಿರುವ ಈ ವನ್ಯ ಜೀವಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ನೀರುನಾಯಿಗಳ ಕಳ್ಳ ಬೇಟೆಯನ್ನು ಕಟ್ಟು ನಿಟ್ಟಾಗಿ ತಡೆಯಬೇಕು’ ಎಂದು ಮುಖಂಡ ಕೆ. ಚಂದನ್ ಆಗ್ರಹಿಸಿದರು. ರಾಮು, ಸತೀಶ್, ಶಂಕರ್, ಲಕ್ಷ್ಮಿನಾರಾಯಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.