ADVERTISEMENT

ಮಂಡ್ಯ | 'ಮೌಢ್ಯದಿಂದ ಹೊರಬರಲು ವೈಚಾರಿಕ ಮನೋಭಾವ ಅಗತ್ಯ'

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉಪನ್ಯಾಸಕರು, ಪ್ರಾಂಶುಪಾಲರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 5:37 IST
Last Updated 11 ಆಗಸ್ಟ್ 2025, 5:37 IST
ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು
ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು   

ಮಂಡ್ಯ: ‘ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್‌ ಅವರ ವೈಚಾರಿಕ ಮನೋಭಾವ ಅರಿತುಕೊಂಡರೆ ಮೌಢ್ಯದಿಂದ ಹೊರಬರಲು ಸಾಧ್ಯ’ ಎಂದು ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ನಿವೃತ್ತ ಜಂಟಿ ನಿರ್ದೇಶಕ ಆರ್.ಮಹದೇವಪ್ಪ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಭವನದಲ್ಲಿ ರಾಜ್ಯ ಪದವಿಪೂರ್ವ ಕಾಲೇಜು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಧಿಕಾರಿಗಳು, ಉಪನ್ಯಾಸಕರು ಮತ್ತು ಬೋಧಕೇತರ ನೌಕರರ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಅಭಿನಂದನೆ, ರಾಜ್ಯ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಶಿಕ್ಷಣ ವ್ಯವಸ್ಥೆಯು ಆಮೂಲಾಗ್ರ ಬದಲಾಣೆಯಾಗುತ್ತಿದೆ. ಶಿಕ್ಷಣ ಪಡೆದವರು ಉತ್ತಮ ಜೀವನ ಕಟ್ಟಿಕೊಳ್ಳುವುದರಲ್ಲಿ ನಿರತರಾಗಿದ್ದು, ಜೊತೆಗೆ ಉದ್ಯೋಗ, ಉದ್ಯಮಗಳನ್ನು ಸ್ಥಾಪಿಸುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ‘ಮಹನೀಯರ ಸಿದ್ಧಾಂತ ತಿಳಿಸುವ ಮೂಲಕ ಅವರಿಗೆ ಪೂಜೆಗಳನ್ನು ಮಾಡಿ ವಿದ್ಯಾರ್ಥಿಗಳ ಗಮನ ಸೆಳೆದರೆ ಸಾಲವುದಿಲ್ಲ. ಈ ಪೂಜೆ ಎಲ್ಲವನ್ನು ಬಿಟ್ಟು ಅವರಂತೆ ನಾವು ಆಗಬೇಕು ಹಾಗೂ ಸಾಧನೆ ಮಾಡಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಮನೋಭಾವ ಬರಬೇಕು. ಶಿಕ್ಷಕರು ಇದನ್ನು ತಿಳಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಅಂಬೇಡ್ಕರ್‌ ಅವರ ಫೋಟೋ, ಫ್ಲೆಕ್ಸ್‌ಗಳನ್ನು ಅಲ್ಲಲ್ಲಿ ಅಳವಡಿಸಿ ಪ್ರೀತಿ ತೋರುವುದಕ್ಕಿಂತ ಅವರು ನಡೆದು ಬಂದ ದಾರಿಯನ್ನು ನಮ್ಮ ಮಕ್ಕಳಿಗೆ ತಿಳಿಸುವ ಕೆಲಸವನ್ನು ಮಾಡಬೇಕು. ಆಗಮಾತ್ರ ಅಂಬೇಡ್ಕರ್‌ ಅವರ ಚಿಂತನೆಗಳು ಸಾಕಾರವಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರಯ್ಯ ಮಾತನಾಡಿ, ‘ಮೀಸಲಾತಿ, ಬಡ್ತಿ ಹುದ್ದೆಗಳು ಸೇರಿ ಅನೇಕ ಸೌಲಭ್ಯಗಳು ಎಸ್‌ಸಿ, ಎಸ್‌ಟಿ ನೌಕರರಿಗೆ ಸಕಾಲದಲ್ಲಿ ದೊರೆಯಬೇಕು. ಇವುಗಳನ್ನು ನೀಡದೆ ವಂಚಿಸುವ ಎಸ್‌ಸಿ, ಎಸ್‌ಟಿ ನೌಕರರ ವಿರೋಧಿ ಅಧಿಕಾರಿಗಳಿಗೆ ಕಾನೂನಾತ್ಮಕವಾಗಿ ತಕ್ಕ ಶಿಕ್ಷೆಗೆ ಗುರಿಪಡಿಸುವುದು ಅನಿವಾರ್ಯವಾಗಿದೆ’ ಎಂದು ಅಸಮಾಧಾನ ಹೊರಹಾಕಿದರು.

ಜೊತೆಗೆ ಸಾಧಕ ಉಪನ್ಯಾಸಕರು ಮತ್ತು ಪ್ರಾಂಶುಪಾಲರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಪನಿರ್ದೇಶಕ ಸಿ.ಚಲುವಯ್ಯ, ನೌಕರರ ಸಂಘದ ರಾಜ್ಯ ಘಕಟದ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಜಯರಾಮು, ಜಿಲ್ಲಾ ಘಟಕ ಅಧ್ಯಕ್ಷ ಶಿವಲಿಂಗಯ್ಯ, ಗೌರವಾಧ್ಯಕ್ಷ ವಿ.ಕೆ.ಆನಂದ್ ಭಾಗವಹಿಸಿದ್ದರು.

‌ಆಮೂಲಾಗ್ರ ಬದಲಾವಣೆಯತ್ತ ಶಿಕ್ಷಣ ಮಹನೀಯರಂತೆ ಕೊಡುಗೆ ನೀಡಿ ಸಾಧಕರನ್ನ ನೆನೆಯುವುದಷ್ಟೇ ಕೆಲಸ ಆಗದಿರಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.