ADVERTISEMENT

ಕೊನೆಯ ಭಾಗಕ್ಕೆ ತಲುಪದ ನೀರು

ನಾಲೆ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ರೈತರ ಆರೋಪ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 4:53 IST
Last Updated 24 ಜುಲೈ 2025, 4:53 IST
ಭಾರತೀನಗರ ಸಮೀಪದ ಅಣ್ನೂರು ಭಾಗದಲ್ಲಿರುವ ಹೆಬ್ಬಕವಾಡಿ (ವಿ.ಸಿ.ನಾಲೆ) ನಾಲೆಯಲ್ಲಿ ಗಿಡ-ಗಂಡಿಗಳು ಬೆಳೆದು ಹೂಳು ತುಂಬಿರುವುದು.
ಭಾರತೀನಗರ ಸಮೀಪದ ಅಣ್ನೂರು ಭಾಗದಲ್ಲಿರುವ ಹೆಬ್ಬಕವಾಡಿ (ವಿ.ಸಿ.ನಾಲೆ) ನಾಲೆಯಲ್ಲಿ ಗಿಡ-ಗಂಡಿಗಳು ಬೆಳೆದು ಹೂಳು ತುಂಬಿರುವುದು.   

ಭಾರತೀನಗರ: ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಸೂಳೆಕೆರೆ ನಾಲೆ, ಕಾಗೇಪುರ ವಿಭಾಗದ ಹೆಬ್ಬಕವಾಡಿ (ವಿ.ಸಿ)ನಾಲೆಗಳಲ್ಲಿ ಹೂಳು ತುಂಬಿಕೊಂಡಿದ್ದು, ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಇದರಿಂದ ರೈತರು ಬೆಳೆಗಳಿಗೆ ನೀರುಣಿಸಲು ಪಡಿ‍ಪಾಟಲು ಅನುಭವಿಸುವಂತಾಗಿದೆ.

ಈ ಎರಡೂ ನಾಲೆಗಳೊಳಗೆ, ಇಕ್ಕೆಲಗಳ ಏರಿಗಳ ಮೇಲೆ ಗಿಡ-ಗಂಟಿಗಳು ಬೆಳೆದು ನಿಂತಿದ್ದು, ಇವುಗಳ ಎಲೆಗಳು, ಕಸ, ಕಡ್ಡಿಗಳು ನಾಲೆಯೊಳಗೆ ಬಿದ್ದು ಕೊಳೆತು ಹೂಳಾಗಿ ಪರಿಣಮಿಸಿವೆ. ಇದರ ಜೊತೆಗೆ ಮಳೆಗಾಲದಲ್ಲಿ ಕೊಚ್ಚಿಕೊಂಡು ಬರುವ ಮಣ್ಣು ಕೂಡ ನಾಲೆಯೊಳಗೆ ತುಂಬಿಕೊಂಡಿದೆ. ಅಲ್ಲದೆ ಹೆಬ್ಬಕವಾಡಿ (ವಿ.ಸಿ.ನಾಲೆ) ನಾಲೆಯುದ್ದಕ್ಕೂ ವಡಕೆ ಕಳೆ ಬೆಳೆದಿದ್ದು, ನೀರು ಸರಾಗವಾಗಿ ಹರಿಯದಂತಾಗಿದೆ. ಇದರಿಂದಾಗಿ ಕೊನೆ ಭಾಗಕ್ಕೆ ನೀರು ತಲುಪಲು ಸಾಧ್ಯವಾಗುತ್ತಿಲ್ಲ’ ಎಂಬುದು ರೈತರ ಆರೋಪ.

ಹೆಬ್ಬಕವಾಡಿ ನಾಲೆ (ವಿ.ಸಿ.ನಾಲೆ)ಯು 29 ಕಿ.ಮೀ ಉದ್ದವಿದ್ದು, ಇದರಲ್ಲಿ ಮದ್ದೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ 18 ಕಿ.ಮೀ ಉದ್ದದ ನಾಲೆಯನ್ನು ಹೊಂದಿದೆ. ಸಾವಿರಾರು ಎಕರೆ ಅಚ್ಚಕಟ್ಟು ಪ್ರದೇಶ ಹೊಂದಿದ್ದು, ನಾಲೆಯ ದುಃಸ್ಥಿತಿಯಿಂದ ಅಚ್ಚಕಟ್ಟು ಪ್ರದೇಶದ ರೈತರು ಜಮೀನುಗಳಿಗೆ ನೀರುಣಿಸಲು ಸಾಧ್ಯವಾಗದ ಸ್ಥಿತಿಯಿದೆ. ಪುಟ್ಟೇಗೌಡನದೊಡ್ಡಿ ಕೊನೆ ಭಾಗವಾಗಿದ್ದು, ಇಲ್ಲಿಗೆ ಕೃಷ್ಣರಾಜಸಾಗರ ಜಲಾಶಯದಿಂದ ನೀರು ಬಿಟ್ಟ 15-20 ದಿನಗಳ ನಂತರ ನೀರು ಬರುತ್ತದೆಯಾದರೂ, ಒಂದೇ ದಿನಕ್ಕೆ ನೀರು ನಿಂತುಹೋಗುತ್ತದೆ.

ADVERTISEMENT

ಸೂಳೆಕೆರೆ ನಾಲೆಯು ಕೆರೆಯಿಂದ 17 ಕಿ.ಮೀ ಉದ್ದದ ಉತ್ತರ ನಾಲೆ ಹರಿಯುತ್ತಿದ್ದು, ಅಜ್ಜಹಳ್ಳಿ, ಮಠದದೊಡ್ಡಿ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶವಾಗಿದ್ದು, ಈ ನಾಲೆ 2,725 ಎಕರೆಯಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿದೆ. ದಕ್ಷಿಣ ನಾಲೆ 11.5 ಕಿ.ಮೀ ಉದ್ದವಿದ್ದು, ಅಣ್ಣೂರು, ಕಾರ್ಕಹಳ್ಳಿ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶವಾಗಿದ್ದು, ಇದು 3,725 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕೊನೆ ಭಾಗವಾದ ಅಣ್ಣೂರು ಗ್ರಾಮದ ಅಚ್ಚುಕಟ್ಟು ಪ್ರದೇಶಗಳಿಗೆ ಸೂಳೆಕೆರೆ ನಾಲೆ ನೀರು ಹರಿದು ಬರದಿದ್ದು, ಇಲ್ಲಿಯ ಜನರು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ರಾಸಾಯನಿಕಯುಕ್ತ ನೀರು, ಚರಂಡಿ ನೀರಿನಲ್ಲಿ ಬೆಳೆ ಬೆಳೆಯಬೇಕಾದ ಪರಿಸ್ಥಿತಿ ಇದೆ.

ಈಗ ನಾಲೆಗಳಿಗೆ ನೀರು ಬಿಡುವ ನೀರು ಬಿಡುವ ಸಮಯ ಬಂದಿದ್ದು, ನಾಲೆಗಳನ್ನು ಶುಚಿಗೊಳಿಸಿ ನೀರು ನೀಡಲಿ ಎಂಬುದು ರೈತರ ಆಗ್ರಹವಾಗಿದೆ. ಆದರೆ ಹೆಬ್ಬಕವಾಡಿ ನಾಲೆ (ವಿ.ಸಿ.ನಾಲೆ) ವ್ಯಾಪ್ತಿಯ ನಾಲೆಗಳಿಗೆ ಟೆಂಡರ್‌ ಮೂಲಕ ಶುಚಿಗೊಳಿಸುವ ಗುತ್ತಿಗೆ ನೀಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಟೆಂಡರ್‌ ಕರೆಯುವುದು ಯಾವಾಗ?, ಶುಚಿಗೊಳಿಸಿ ಹೂಳೆತ್ತಿಸುವುದು ಯಾವಾಗ? ಎಂಬ ಪ್ರಶ್ನೆಯನ್ನು ರೈತರು ಎತ್ತಿದ್ದಾರೆ.

ಸೂಳೆಕೆರೆ ದಕ್ಷಿಣ ನಾಲೆಯ ಕೊನೆ ಭಾಗವಾದ ಅಣ್ಣೂರು ಗ್ರಾಮದಲ್ಲಿನ ನಾಲೆಯ ದುಸ್ಥಿತಿ.
ಶಿವಲಿಂಗೇಗೌಡ
ಎಲ್.ಪ್ರಶಾಂತ್ ಲಿಂಗಯ್ಯ

Highlights - ಸೂಳೆಕೆರೆ, ಹೆಬ್ಬಕವಾಡಿ (ವಿ.ಸಿ)ನಾಲೆಗಳಲ್ಲಿ ಹೂಳು ಕೆ.ಆರ್‌.ಎಸ್ ನೀರು ತಲುಪಲು ಬೇಕು 20 ದಿವಸ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ರಾಸಾಯನಿಕ ನೀರು

Quote - ನಾಲೆ ಬಯಲಿನಲ್ಲಿ ಜಮೀನಿದ್ದು ಗಿಡ-ಗಂಟಿಗಳು ಬೆಳೆದಿರುವುದರಿಂದ ಸರಾಗವಾಗಿ ನೀರು ಹರಿದು ಬಾರದ ಕಾರಣ ಬೆಳೆಗಳಿಗೆ ನೀರು ಹಾಯಿಸಲು ಸಾಕಷ್ಟು ತೊಂದರೆಯಾಗುತ್ತಿದೆ. ಶೀಘ್ರ ಹೂಳು ತೆಗೆಸಲಿ ಶಿವಲಿಂಗೇಗೌಡ ರೈತ ಅಣ್ಣೂರು.

Quote - ನಾಲೆಯ ಕಡೆಯ ಭಾಗದಲ್ಲಿ ಹೂಳೆತ್ತಿ ಶುಚಿಗೊಳಿಸಲು ಸಾಧ್ಯವಾಗುತ್ತಿಲ್ಲ. ಚರಂಡಿ ನೀರನ್ನು ಹರಿಯಬಿಟ್ಟಿರುವುದರಿಂದ ನಾಲೆಯೊಳಗೆ ಇಳಿಯಲು ಆಗುತ್ತಿಲ್ಲ. ಅಣ್ಣೂರು ಗ್ರಾಮ ಪಂಚಾಯಿತಿಯವರು ನಾಲೆಯನ್ನು ಶುಚಿಗೊಳಿಸಿಕೊಳ್ಳಲಿ -ಎಲ್‌.ಪ್ರಶಾಂತ್‌ ಲಿಂಗಯ್ಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕಾವೇರಿ ನೀರಾವರಿ ನಿಗಮ ಭಾರತೀನಗರ ಶಾಖೆ

Cut-off box - ‘6 ತಿಂಗಳ ಅವಧಿಗೆ ಟೆಂಡರ್’ ‘ಹೆಬ್ಬಕವಾಡಿ ನಾಲೆ (ವಿ.ಸಿ.ನಾಲೆ) ಹೋಳೆತ್ತಿಸಲು ಈ ಹಿಂದೆ ಟೆಂಡರ್‌ ಕರೆಯಲಾಗುತ್ತಿರಲಿಲ್ಲ. ಯಾರಿಗಾದರೂ ತಾತ್ಕಾಲಿಕ ಗುತ್ತಿಗೆ ನೀಡಿ ಶುಚಿಗೊಳಿಸಲಾಗುತ್ತಿತ್ತು. ಗಿಡ-ಗಂಟಿಗಳು ಬೆಳೆದರೆ ಮತ್ತೆ ಗುತ್ತಿಗೆ ನೀಡಬೇಕಾಗಿತ್ತು. ಆದ್ದರಿಂದ ಮುಂದೆ 6 ತಿಂಗಳ ಅವಧಿಗೆ ಟೆಂಡರ್‌ ಕರೆದು ಶುಚಿಗೊಳಿಸಿ ಗಿಡಗಳನ್ನು ತೆಗೆಯಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇದರಿಂದ 6 ತಿಂಗಳು ಟೆಂಡರ್‌ದಾರರದೇ ಹೊಣೆಗಾರಿಕೆ ಇರುತ್ತದೆ’ ಎಂದು ಕಾವೇರಿ ನೀರಾವರಿ ನಿಗಮದ ಕಾಗೇಪುರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್‌.ಭರತೇಶ್‌ಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.