ADVERTISEMENT

ಬೆಲೆ ಏರಿಕೆಗೆ ಖಂಡನೆ; ರೈತರಿಂದ ರಸ್ತೆ ತಡೆ

ಟ್ರಾಕ್ಟರ್‌ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 16:22 IST
Last Updated 8 ಏಪ್ರಿಲ್ 2022, 16:22 IST
ವಶಪ‍ಡಿಸಿಕೊಂಡ ಟ್ರಾಕ್ಟರ್‌ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಸಾಮಿಲ್‌ ಮಾಲೀಕರು ಮತ್ತು ರೈತ ಸಂಘದ ಕಾರ್ಯಕರ್ತರು ಮಂಡ್ಯ ನಗರದ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ವಶಪ‍ಡಿಸಿಕೊಂಡ ಟ್ರಾಕ್ಟರ್‌ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಸಾಮಿಲ್‌ ಮಾಲೀಕರು ಮತ್ತು ರೈತ ಸಂಘದ ಕಾರ್ಯಕರ್ತರು ಮಂಡ್ಯ ನಗರದ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ರಸಗೊಬ್ಬರ ಬೆಲೆ ಏರಿಕೆ ಖಂಡಿಸಿರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆ ವಾಪಸ್‌ ಪಡೆಯಬೇಕು. ರೈತರ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಿಕೊಡಬೇಕು. ಎಪಿಎಂಸಿಯನ್ನು ಮತ್ತಷ್ಟು ಬಲಪಡಿಸಬೇಕು. ಕನಿಷ್ಠ ಬೆಂಬಲ ಬೆಲೆ ಎಂಬ ಪರಿಕಲ್ಪನೆಯನ್ನು ತಂದಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಕೇಂದ್ರ ಸರ್ಕಾರ ಅನುಸರಿಸುತ್ತಿರುವ ರೈತ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿ.ಎ.ಶಂಕರ್, ಎಂ.ಎನ್‌.ವಿಜಯಕುಮಾರ್, ಹರವು ಪ್ರಕಾಶ್‌, ಎಣ್ಣಹೊಳೆಕೊಪ್ಪಲು ಮಂಜುನಾಥ್‌,ಲಿಂಗಪ್ಪಾಜಿ, ಶಿವಳ್ಳಿ ಚಂದ್ರು, ಹಲ್ಲೇಗೆರೆ ಹರೀಶ್, ನವೀನ್‌ ಕನ್ನಲಿ ಭಾಗವಹಿಸಿದ್ದರು.

ADVERTISEMENT

ಅರಣ್ಯ ಇಲಾಖೆ ನಡೆಗೆ ಆಕ್ರೋಶ

ಮಂಡ್ಯ: ಅರಣ್ಯ ಇಲಾಖೆಯ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಮರದ ವ್ಯಾಪಾರಿಗಳು ಮತ್ತು ಸಾಮಿಲ್‌ ಮಾಲೀಕರ ಸಂಘ, ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು.

ನಗರದ ಅರಣ್ಯ ಇಲಾಖೆ ಕಚೇರಿ ಎದುರು ಸೇರಿದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಮದ್ದೂರಿನಲ್ಲಿ ಟ್ರಾಕ್ಟರ್‌ ಸಮೇತ ಆಲದ ಮರವನ್ನು ವಶಕ್ಕೆ ಪಡೆದು ರೈತರಿಗೆ ಅನ್ಯಾಯ ಮಾಡಿರುವ ಎಸಿಎಫ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕಾನೂನಿನ ನೆಪವೊಡ್ಡಿ ಆಲದ ಮರ ತುಂಬಿದ್ದ ಟ್ರಾಕ್ಟರ್‌ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಬಿಡಗಡೆಗೆ ಆಗ್ರಹಿಸಿದರು.

ಸಮಸ್ಯೆಗೆ ಸ್ಪಂದಿಸದಿದ್ದರೆ ‘ರೈತರ ಮರ ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ರಾಜ್ಯದಲ್ಲಿ ಪ್ರತಿಭಟನೆ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಂಚಾರಿ ದಳದವರು ಜಿಲ್ಲೆಯ ಎಲ್ಲ ಸಾಮಿಲ್‌ಗಳಿಗೂ ಭೇಟಿ ನೀಡಿ ಕಿರುಕುಳ ನೀಡುತ್ತಿದ್ದಾರೆ. ಇದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಾಮಿಲ್‌ ಮಾಲೀಕರ ಸಂಘದ ಅಧ್ಯಕ್ಷ ಲಿಂಗೇಗೌಡ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌.ಕೆಂಪೂಗೌಡ, ಶಿವಳ್ಳಿ ಚಂದ್ರು,ಪಾಪಣ್ಣ, ಪಟೇಲ್‌, ಹಲ್ಲೇಗೆರೆ ಹರೀಶ್, ಪಣಕನಹಳ್ಳಿ ಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.