ADVERTISEMENT

ಅಂಗನವಾಡಿ ನೌಕರರಿಗೆ ₹50 ಲಕ್ಷ ವಿಮೆ ನೀಡಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 15:24 IST
Last Updated 14 ಜುಲೈ 2020, 15:24 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ಅಂಗನವಾಡಿ ನೌಕರರ ಸಂಘ, ಸಿಐಟಿಯು ಸದಸ್ಯರು  ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ಅಂಗನವಾಡಿ ನೌಕರರ ಸಂಘ, ಸಿಐಟಿಯು ಸದಸ್ಯರು  ಪ್ರತಿಭಟನೆ ನಡೆಸಿದರು   

ಮಂಡ್ಯ: ಅಂಗನವಾಡಿ ನೌಕರರು ಕೊರೊನಾ ಸೇನಾನಿಗಳಾಗಿದ್ದು ಅವರಿಗೆ ₹ 50 ಲಕ್ಷ ವಿಮೆ ನೀಡಬೇಕು, ಸೋಂಕಿತ ನೌಕರರಿಗೆ ₹5 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ, ಸಿಐಟಿಯು ಸದಸ್ಯರು ಮಂಗಳವಾರ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ನಗರದ ಬಾಲ ಭವನದ ಬಳಿಯಿಂದ ಹೊರಟ ಪ್ರತಿಭಟನಾಕಾರರು ಯೋಜನಾಧಿಕಾರಿ ಕಚೇರಿ ಮುಂದೆ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.

ಅಂಗನವಾಡಿ ನೌಕರರಿಗೆ ಗುಣಮಟ್ಟದ ಸ್ಯಾನಿಟೈಸರ್‌, ಪಿಪಿಇ ಕಿಟ್‌, ಮುಖಗವಸು ನೀಡಬೇಕು. ಮಾಸಿಕವಾಗಿ ಮಕ್ಕಳ ತಪಾಸಣೆ ಮತ್ತು ಸೂಕ ಮಾಡುವಾಗ ಅಂಗನವಾಡಿ ಕೇಂದ್ರಗಳನ್ನು ತೂಕದ ಯಂತ್ರಗಳನ್ನು ಸ್ಯಾನಿಟೈಸ್‌ ಮಾಡಬೇಕು. ಕೆಲಸದ ಸಂದರ್ಭದಲ್ಲಿ ಅಂಗನವಾಡಿ ನೌಕರರಿಗೆ ಹಲ್ಲೆಗಳಾಗಿದ್ದು, ಕೂಡಲೇ ಇದನ್ನು ತಡೆಗಟ್ಟಬೇಕು. ಕೊರೊನಾ ಸಂಕಷ್ಟದ ಕಾಲದಲ್ಲಿ ಕುಟುಂಬವನ್ನು ಲೆಕ್ಕಿಸದೆ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ ₹25 ಪ್ರೋತ್ಸಾಹಧನ ನೀಡಬೇಕು, ಸ್ಥಳೀಯ ಸಾರಿಗೆ ಬಸ್‌ಪಾಸ್‌, ಊಟದ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಮುಂಗಡವಾಗಿ ಮೊಟ್ಟೆ ಬಿಲ್‌, ತಿಂಗಳಿಗೆ ಸರಿಯಾಗಿ ಬಾಡಿಗೆ, ಗ್ಯಾಸ್‌, ಗೌರವಧನ ಪಾವತಿಸಬೇಕು. ಬಾಕಿ ಮೊತ್ತ‌, ಮರಣ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಸಹಾಯಕಿಯರಿಗೆ ಮುಂಬಡ್ತಿ ನೀಡುವಾಗ ಇರುವ ವಯಸ್ಸಿನ ಮಿತಿಯನ್ನು ತೆಗೆದು ಹಾಕಬೇಕು. ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು. ಅಲ್ಲಿಯವರೆಗೆ ಕಾರ್ಯಕರ್ತೆಯರಿಗೆ ₹30ಸಾವಿರ, ಸಹಾಯಕಿಯರಿಗೆ ₹21ಸಾವಿರ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳಾ ಕುಮಾರಿ, ಕಾರ್ಯದರ್ಶಿ ಮಂಗಳಾ, ಖಜಾಂಚಿ, ಶಿಲ್ಪಶ್ರೀ, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.