ADVERTISEMENT

ಮೈಷುಗರ್‌: ಕುತಂತ್ರಿಗಳಿಗೆ ಮಣೆ ಹಾಕದಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 14:06 IST
Last Updated 4 ಅಕ್ಟೋಬರ್ 2021, 14:06 IST
ಮೈಷುಗರ್‌ ಉಳಿವಿಗಾಗಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಕನ್ನಡ ಸೇನೆ ಅಧ್ಯಕ್ಷ ಕೆ.ಆರ್‌.ಕುಮಾರ್‌ ಮಾತನಾಡಿದರು
ಮೈಷುಗರ್‌ ಉಳಿವಿಗಾಗಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಕನ್ನಡ ಸೇನೆ ಅಧ್ಯಕ್ಷ ಕೆ.ಆರ್‌.ಕುಮಾರ್‌ ಮಾತನಾಡಿದರು   

ಮಂಡ್ಯ: ‘ರಾಜಕಾರಣದ ಮೂಲಕ ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಕುತಂತ್ರಿಗಳಿಗೆ ಸರ್ಕಾರ ಮಣೆ ಹಾಕಬಾರದು, ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ಉಳಿಸಿಕೊಳ್ಳಬೇಕು’ ಎಂದು ಕನ್ನಡಸೇನೆ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಅರ್.ಕುಮಾರ್‌ ಒತ್ತಾಯಿಸಿದರು.

ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಜಿಲ್ಲಾ ರೈತಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ಆರಂಭವಾಗಿರುವ ಧರಣಿಯು 22ನೇ ದಿನ ಪೂರೈಸಿದ್ದು, ಶನಿವಾರ ಧರಣಿಗೆ ಬೆಂಬಲಿಸಿ ಅವರು ಮಾತನಾಡಿದರು.

‘ಮೈಷುಗರ್ ಉಳಿವಿಗಾಗಿ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಲಾಗುವುದು. ಜೊತೆಗೆ ಪ್ರತಿಭಟನೆ ಮಾಡಿ ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು. ಕುತಂತ್ರ ರಾಜಕಾರಣದ ಮೂಲಕ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದನ್ನು ಸಹಿಸುವುದಿಲ್ಲ. ಈ ಕಾರ್ಖಾನೆಯನ್ನೇ ರೈತರು ಅವಲಂಬಿಸಿದ್ದಾರೆ, ಅವರಿಗೆ ಅನ್ಯಾಯ ಮಾಡಬಾದೇ ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ಆರಂಭ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕನ್ನಡ ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌ ಮಾತನಾಡಿ ‘ದಸರಾ ಹಬ್ಬ ನಡೆಯುವ ಮುನ್ನವೇ ಮೈಷುಗರ್‌ ಸಮಸ್ಯೆ ಬಗೆಹರಿಸಬೇಕು. ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಯಬೇಕು ಎಂಬುದನ್ನು ಹೋರಾಟಗಾರ ನಿಲುವಾಗಿದೆ. ಚಳವಳಿ ಕೈಬಿಡಬೇಕು ಎಂದರೆ, ಖಾಸಗೀಕರಣ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಅವರು ಹೇಳಿಕೆ ನೀಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪೌರಾಣಿಕ ರಂಗಭೂಮಿ ನಿರ್ದೇಶಕರು ಮತ್ತು ವಾದ್ಯಗಾರರ ಟ್ರಸ್ಟ್ ಸದಸ್ಯರು ಹೋರಾಟದ ಗೀತೆಗಳನ್ನು ಹಾಡಿದರು. ಗಾಯಕರಾದ ವಿಜಿ, ಗೊರವಾಲೆ ಚಂದ್ರಶೇಖರ್, ಉರುಗಲವಾಡಿ ರಾಮಯ್ಯ, ಗಾಮನಹಳ್ಳಿ ಸ್ವಾಮಿ, ಹನಿಂಯಂಬಾಡಿ ಶೇಖರ್ ಹಾಡಿದರು.

ಜಿಲ್ಲಾ ಹಿತರಕ್ಷಣ ಸಮಿತಿಇ ಸಮಿತಿಯ ಕೆ.ಬೋರಯ್ಯ, ಸುನಂದಾ ಜಯರಾಂ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಾಹಿತಿ ಜಿ.ಟಿ.ವೀರಪ್ಪ, ಬಿಸಿಯೂಟದ ನೌಕರರ ಸಂಘದ ಮಹದೇವಮ್ಮ, ರೈತ ಸಂಘ(ಮೂಲಸಂಘಟನೆ)ದ ಕಾರ್ಯಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಜೆಡಿಎಸ್‌ ನಾಯಕಿ ಅಂಬುಜಮ್ಮ ಮುನೇಗೌಡ, ಕುಬೇರಶೆಟ್ಟಿ, ಎಲ್‌.ಎನ್‌.ಗೌಡ, ಚಂದನ್‌ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.