ಮಂಡ್ಯ: ತಾಲ್ಲೂಕಿನ ಕೆರಗೋಡು ಹೋಬಳಿಯ ಹುಲಿವಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನರು ಕಡುಬಡವರಾಗಿದ್ದು, ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು ಮತ್ತು ಸ್ಮಶಾನ ಒತ್ತುವರಿಯನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿ ಹುಲಿವಾನ ಜನತಾ ಕಾಲೋನಿ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಹುಲಿವಾನ ಗ್ರಾಮದ ಸರ್ವೆ ನಂ.44/ಪಿ14ರಲ್ಲಿ ಸರ್ಕಾರ ಸುಮಾರು 8 ಎಕರೆ 9 ಗುಂಟೆ ನಿವೇಶನಕ್ಕಾಗಿ ಮಂಜೂರು ಮಾಡಿ, ಹುಲಿವಾನ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದೆ. ಆರೇಳು ವರ್ಷಗಳಾದರೂ ನಿವೇಶನ ಹಂಚಿಕೆ ಮಾಡಿಲ್ಲ. ಇದಕ್ಕೆ ಕೆಲವು ಪಟ್ಟಭದ್ರರು ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಹುಲಿವಾನ ಜನತಾ ಕಾಲೊನಿ ಗ್ರಾಮಕ್ಕೆ ಸ್ಮಶಾನ ಇರುವುದಿಲ್ಲ. ಸರ್ವೆ ನಂ.93ರಲ್ಲಿ ಸ್ಮಶಾನ ಜಾಗವಿದೆ. ಸ್ಮಶಾನ ಒತ್ತುವರಿ ತೆರವು ಮಾಡಲು ಕೋರ್ಟ್ ಆದೇಶವಿದ್ದರೂ ಏಳು ತಿಂಗಳಿಂದ ಕಾರ್ಯ ನನೆಗುದಿಗೆ ಬಿದ್ದಿದೆ. ಕೆಲವು ಪಟ್ಟಭದ್ರರ ಮಾತು ಕೇಳಿಕೊಂಡು ಸರ್ವೆಯರ್ ಮತ್ತು ಅಧಿಕಾರಿಗಳು ತೆರವು ಕಾರ್ಯ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
ಗ್ರಾಮಸಭೆ ನಡೆಸಿ, ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ಹಕ್ಕುಪತ್ರವನ್ನು ಕೂಡಲೇ ನೀಡಬೇಕು. ಸ್ಮಶಾನ ಒತ್ತುವರಿ ತೆರವು ಮಾಡಿ ರಸ್ತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ಆರ್., ಅಂಬುಜಿ ಸಿ., ಶಿವಲಿಂಗಯ್ಯ, ಯೋಗೇಶ ಎಂ., ಶಿವಮಾದು, ಗಿರೀಶ ಕೆ., ಸವಿತಾ, ಕೆಂಪಾಜಮ್ಮ, ವಿನೋದ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.