ಮಂಡ್ಯ: ಹಾಲಹಳ್ಳಿಯಲ್ಲಿ ಕೊಳೆಗೇರಿ ನಿವಾಸಿಗಳಿಗಾಗಿ ನಿರ್ಮಿಸುತ್ತಿರುವ ಮನೆಗಳನ್ನು ಶೀಘ್ರವೇ ಪೂರ್ಣಗೊಳಿಸಿ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಕೊಳೆಗೇರಿ ನಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ಹಾಲಹಳ್ಳಿ ಸ್ಲಂನಲ್ಲಿ 712 ಕುಟುಂಬಗಳು ವಾಸ ಮಾಡುತ್ತಿದ್ದು, ಅವರ ಜೀವನ ಅತಂತ್ರ ಸ್ಥಿತಿಯಲ್ಲಿದೆ. ಮಳೆ ಬಂದರೆ ಕೊಳಚೆ ನೀರು ಶೆಡ್ಗಳಿಗೆ ನುಗ್ಗಿ ಇಡೀ ರಾತ್ರಿ ಜಾಗರಣೆ ಇರುವಂತಾಗಿದೆ. ಸೂಕ್ತ ಸೂರು ಇಲ್ಲದೆ ಕೊಳಚೆಯ ನಡುವೆಯೇ ಜೀವನ ನಡೆಸುವಂತಾಗಿದೆ. 2015 ರಲ್ಲಿ ಅಂದಿನ ವಸತಿ ಸಚಿವರಾಗಿದ್ದ ಅಂಬರೀಷ್ ಅವರು 712 ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಒಂದು ವರ್ಷದಲ್ಲಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದ್ದರು. ಆದರೆ 5 ವರ್ಷ ಕಳೆದರೂ ಮನೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ದಸಂಸ ಜಿಲ್ಲಾ ಘಟಕದ ಸದಸ್ಯರು ಹೋರಾಟಕ್ಕೆ ಬೆಂಬಲಿ ನೀಡಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಈಗ ನಿರ್ಮಾಣ ಮಾಡುತ್ತಿರುವ ಮನೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಕೂಡಲೇ ಅದನ್ನು ಸರಿಪಡಿಸಿಕೊಡಬೇಕು ಎಂದು ಆಗ್ರಹಿಸಿದರು.
ಹಾಲಹಳ್ಳಿ ಸ್ಲಂಗೆ ಸೇರಿದ ಸ.ನಂ 14 ಮತ್ತು 16ರಲ್ಲಿನ 16 ಎಕರೆ 8 ಗುಂಟೆ ಭೂಮಿ ಅಳತೆ ಮಾಡಿಸಿ ಯಾರೂ ಅತಿಕ್ರಮಿಸದಂತೆ ಕ್ರಮ ಕೈಗೊಳ್ಳಬೇಕು. ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸದಿದ್ದರೂ ಕಂತಿನ ಹಣ ಕಟ್ಟಬೇಕು ಎಂದು ಒತ್ತಡ ತರುತ್ತಿದ್ದು, ಹಣವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.