ಮಂಡ್ಯ: ಕೃಷಿಯಲ್ಲಿ ಬಳಸುವ ಲಘು ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಜಂಟಿ ಕೃಷಿ ನಿರ್ದೇಶಕ ವಿ.ಎಸ್. ಅಶೋಕ್ ಸಲಹೆ ನೀಡಿದರು.
ನಗರದ ಪರತಂತ್ರ ಜೀವಿ ಪ್ರಯೋಗಾಲಯದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕಿನ ಕೃಷಿ ಪರಿಕರ ಹಾಗೂ ಬಿತ್ತನೆ ಬೀಜ, ಕೀಟನಾಶಕ ಹಾಗೂ ರಸಗೊಬ್ಬರ ಮಾರಾಟಗಾರರಿಗೆ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಉತ್ತಮ ಇಳುವರಿ ಪಡೆಯಲು ತಮ್ಮ ಬೆಳಗಳಿಗೆ ಪೋಷಕಾಂಶವನ್ನು 4:2:1ರ ಅನುಪಾತದಲ್ಲಿ ಬಳಕೆ ಮಾಡಬೇಕು. ಮಾರಾಟಗಾರರು ರೈತರಿಗೆ ಕೃಷಿ ಪರಿಕರ ಮಾರಾಟ ಮಾಡುವ ಸಮಯದಲ್ಲಿ ಲಘು ಪೋಷಕಾಂಶಗಳಾದ ಜಿಂಕ್ ಸಲ್ಫೇಟ್, ಬೋರಾಕ್ಸ್ ಹಾಗೂ ಸೂಕ್ಷ್ಮಾಣು ಜೀವಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಜೊತೆಗೆ ರೈತರು ಕೀಟನಾಶಕಗಳನ್ನು ಮಿತವಾಗಿ ಬಳಸುವಂತೆಯೂ ಸಲಹೆ ನೀಡಬೇಕು ಎಂದರು.
ಉಪ ಕೃಷಿ ನಿರ್ದೇಶಕ(ಮಂಡ್ಯ ಉಪ ವಿಭಾಗ-1) ಮುನೇಗೌಡ ಮಾತನಾಡಿ, ‘ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಅದರಲ್ಲಿ ನಮೂದು ಮಾಡಲಾಗಿರುವ ಕೃಷಿ ಪರಿಕರಗಳನ್ನು ಮಾತ್ರ ರೈತರಿಗೆ ಮಾರಾಟ ಮಾಡಬೇಕು’ ಎಂದು ತಿಳಿಸಿದರು.
ಜಾರಿದಳ ವಿಭಾಗ ಕಚೇರಿಯ ಜಂಟಿ ಕೃಷಿ ನಿರ್ದೇಶಕ ಚನ್ನಕೇಶವ ಮೂರ್ತಿ ಮಾತನಾಡಿ, ಎಲ್ಲಾ ಪರಿಕರ ಮಾರಾಟಗಾರರು ನಿಗದಿತ ನಮೂನೆಯಲ್ಲಿ ದಾಖಲಾತಿಗಳ ನಿರ್ವಹಣೆ ಮಾಡುವುದು ಮುಖ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಎಚ್.ಸುನಿತಾ, ಕೃಷಿ ಅಧಿಕಾರಿಗಳಾದ ದೇವರಾಜೇಗೌಡ, ಹರ್ಷ, ಗಂಗಾ ನರಸಿಂಹಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.