ADVERTISEMENT

ಕೊಳಚೆ ನೀರು ತಡೆಗೆ ‘ಸಮಿತಿ’ ರಚನೆ

ತಡೆಗೋಡೆ, ವೆಟ್‌ವೆಲ್‌ ನಿರ್ಮಾಣಕ್ಕೆ ಕ್ರಮ: ‘ಪ್ರಜಾವಾಣಿ’ ವರದಿಗೆ ಡಿಸಿ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:03 IST
Last Updated 25 ನವೆಂಬರ್ 2025, 3:03 IST
ಶ್ರೀರಂಗಪಟ್ಟಣದ ಒಳಚರಂಡಿಯ ಕೊಳಚೆ ನೀರು ಕಾವೇರಿ ನದಿಗೆ ಸೇರಿ ಮಲಿನವಾಗುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ
ಶ್ರೀರಂಗಪಟ್ಟಣದ ಒಳಚರಂಡಿಯ ಕೊಳಚೆ ನೀರು ಕಾವೇರಿ ನದಿಗೆ ಸೇರಿ ಮಲಿನವಾಗುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ   

ಮಂಡ್ಯ: ‘ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ನಗರದ ತ್ಯಾಜ್ಯ ನೀರು ಕಾವೇರಿ ನದಿಗೆ ಸೇರುತ್ತಿರುವುದನ್ನು ಕಂಡು ಉಪಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಕಾವೇರಿ ನದಿಗೆ ಕೊಳಚೆ ನೀರು ಸೇರದಂತೆ ಸೂಕ್ತ ಕ್ರಮವಹಿಸಿ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ವೆಲ್ಲೆಸ್ಲಿ ಸೇತುವೆ ಬಳಿ ಕಾವೇರಿ ನದಿಗೆ ಹೋಗುತ್ತಿರುವ ಕೊಳಚೆ ನೀರು ತಡೆಗಟ್ಟುವ ಸಂಬಂಧ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾವೇರಿ ನದಿಗೆ ಕೊಳಚೆ ನೀರು ಹೋಗದಂತೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲು ಸಮಿತಿ ರಚಿಸಿ ಜವಾಬ್ದಾರಿಯನ್ನು ನೀಡಿದರು.

ಈಗಾಗಲೇ ವೆಲ್ಲೆಸ್ಲಿ ಸೇತುವೆಯ ವಾಟರ್ ಗೇಟ್ ಬಳಿ ಒಂದು ತಡೆಗೋಡೆಯನ್ನು ನಿರ್ಮಿಸಲಾಗಿದೆ. ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದಾಗಿ ಬಿದ್ದಕೋಟೆ ಗಣಪತಿ ದೇವಸ್ಥಾನದ ಹತ್ತಿರ ಇನ್ನೊಂದು ತಡೆಗೋಡೆ ನಿರ್ಮಿಸಲು ಅಡ್ಡಿಯಾಗಿತ್ತು. ಪ್ರಸ್ತುತ ಪ್ರವಾಹದ ಪ್ರಮಾಣ ಕಡಿಮೆಯಾಗಿದ್ದು ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕಲುಷಿತ ನೀರು ಕಾವೇರಿ ನದಿಗೆ ಸೇರಿದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಬಿದ್ದಕೋಟೆ ಗಣಪತಿ ದೇವಸ್ಥಾನದ ಹತ್ತಿರ ಮತ್ತೊಂದು ತಡೆಗೋಡೆಯನ್ನು ನಿರ್ಮಿಸಿ ಪರ್ಯಾಯ ಮಾರ್ಗವಾಗಿ ಒಂದು ಸೂಕ್ತ ಸ್ಥಳದಲ್ಲಿ ‘ವೆಟ್ ವೆಲ್’ ನಿರ್ಮಿಸಿ ವೆಟ್‌ವೆಲ್‌ ಮೂಲಕ ಕಲುಷಿತಗೊಂಡ ನೀರನ್ನು ಮೋಟಾರ್ ಪಂಪ್ ಮೂಲಕ ಪ್ರಸ್ತುತ ಬಿದ್ದಕೋಟೆ ಗಣಪತಿ ದೇವಸ್ಥಾನದ ಮೇಲ್ಭಾಗದಲ್ಲಿರುವ ವೆಟ್ ವೆಲ್ ಮುಖಾಂತರ ಸಂಗ್ರಹಿಸಿ ಎಸ್.ಟಿ.ಪಿ (ಕೊಳಚೆ ನೀರು ಶುದ್ಧೀಕರಣ ಘಟಕ) ಪ್ಲಾಂಟ್ ಗಂಜಾಂಗೆ ಸಾಗಿಸಿ ವೈಜ್ಞಾನಿಕವಾಗಿ ಸಂಸ್ಕರಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನಾ ಯಾದವ್, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್‌ ಪ್ರತಾಪ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಹರ್ಷ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬಾಸಾಬ್ ಪಾಲ್ಗೊಂಡಿದ್ದರು. 

ಕುಮಾರ ಜಿಲ್ಲಾಧಿಕಾರಿ

‘₹13 ಕೋಟಿ ವೆಚ್ಚದಲ್ಲಿ ಕಾಮಗಾರಿ’

‘₹13 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಆದರೆ ಅಲ್ಲಿ ವೆಲ್ಲೆಸ್ಲಿ ಬ್ರಿಡ್ಜ್‌ ಪಕ್ಕ ನದಿಯ ಪಕ್ಕ ‘ವೆಟ್‌ ವೆಲ್‌’ ಮಾಡಿದರೆ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಅದು ಮುಳುಗುವ ಸಾಧ್ಯತೆ ಇರುತ್ತದೆ ಎಂದು ತಾಂತ್ರಿಕ ವರದಿ ಬಂದಿದೆ. ಅದನ್ನು ಬೇರೆಡೆ ಸ್ಥಳಾಂತರ ಮಾಡಿ ತಡೆಗೋಡೆ ನಿರ್ಮಿಸಲು ಸೂಚಿಸಿದ್ದೇನೆ. ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್‌ ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಒಳಗೊಂಡ ಸಮಿತಿ ರಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ಮಾಹಿತಿ ನೀಡಿದ್ದಾರೆ.