ADVERTISEMENT

ಬಿರುಗಾಳಿ ಮಳೆ: ಉರುಳಿದ 250 ಮರಗಳು

ನಾಗಮಂಗಲ ತಾಲ್ಲೂಕಿನ ಜುಟ್ಟನಹಳ್ಳಿಯಲ್ಲಿ ಮಾವು, ಹಲಸು, ಸೀಬೆ ನಾಶ

​ಪ್ರಜಾವಾಣಿ ವಾರ್ತೆ
Published 24 ಮೇ 2019, 20:12 IST
Last Updated 24 ಮೇ 2019, 20:12 IST
ನಾಗಮಂಗಲ ತಾಲ್ಲೂಕಿನ ಜುಟ್ಟನಹಳ್ಳಿಯಲ್ಲಿ ಬಿರುಗಾಳಿಸಹಿತ ಮಳೆಗೆ ಮಹಾಲಿಂಗ ಅವರ ತೆಂಗಿನ ಮರಗಳು ಉರುಳಿವೆ
ನಾಗಮಂಗಲ ತಾಲ್ಲೂಕಿನ ಜುಟ್ಟನಹಳ್ಳಿಯಲ್ಲಿ ಬಿರುಗಾಳಿಸಹಿತ ಮಳೆಗೆ ಮಹಾಲಿಂಗ ಅವರ ತೆಂಗಿನ ಮರಗಳು ಉರುಳಿವೆ   

ನಾಗಮಂಗಲ: ತಾಲ್ಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಬಿರುಗಾಳಿಸಹಿತ ಮಳೆಗೆ 250ಕ್ಕೂ ಹೆಚ್ಚು ಮರಗಳು ಉರುಳಿವೆ.

ಗ್ರಾಮದ ಮಹಲಿಂಗ ಎಂಬುವರ 10 ತೆಂಗಿನ ಮರಗಳು ಮತ್ತು ರಾಮಚಂದ್ರ ಅವರ 8 ತೆಂಗಿನ ಮರಗಳು ಮುರಿದು ಬಿದ್ದಿವೆ. ಹಲಸು, ಸೀಬೆ ಮತ್ತು ಮಾವಿನ ಮರಗಳು, ದಾಳಿಂಬೆ, ನಿಂಬೆ ಗಿಡಗಳು ಉರುಳಿವೆ. ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ನಾಶವಾಗಿದೆ. ಟೊಮೆಟೊ, ಬೀನ್ಸ್ ಮತ್ತು ಸೌತೆಕಾಯಿ ಬೆಳೆಗಳು ನೆಲಕಚ್ಚಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈರುಳ್ಳಿ ತುಂಬಿದ್ದ ಆರು ಶೆಡ್‌ಗಳ ಚಾವಣಿಗಳು ಹಾರಿ ಹೋಗಿವೆ. ಶೆಡ್ಡಿನಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಈರುಳ್ಳಿ ಹಾಳಾಗಿದೆ. ದನದ ಕೊಟ್ಟಿಗೆ ಕುಸಿದು ಬಿದ್ದಿದೆ.

ADVERTISEMENT

ರಸ್ತೆಗೆ ಅಡ್ಡಲಾಗಿ ಮರಗಳು ಹಾಗೂ ವಿದ್ಯುತ್‌ ಕಂಬಗಳು ಬಿದ್ದಿದ್ದು, ಸಂಪರ್ಕ ಕಡಿತಗೊಂಡಿದೆ. ಗ್ರಾಮದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ.

‘ಬಿರುಬೇಸಿಗೆಯಲ್ಲೂ ತೆಂಗಿನ ಮರಗಳನ್ನು ಜೋಪಾನ ಮಾಡಿ ದ್ದೆವು. ಇವು ಒಳ್ಳೆಯ ಫಸಲು ನೀಡುತ್ತಿದ್ದವು. ಬಿರುಗಾಳಿಗೆ ಮುರಿದು ಬಿದ್ದಿರು ವುದರಿಂದ ಅಪಾರ ನಷ್ಟ ಉಂಟಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮು ಅಳಲು ತೋಡಿಕೊಂಡರು.

ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬಿರುಗಾಳಿಸಹಿತ ಮಳೆ ಬಿದ್ದಿದ್ದು, ಕೆಲವೆಡೆ ಹಾನಿ ಉಂಟಾಗಿದೆ. ಅಧಿಕಾರಿಗಳು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೂ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್ ರೂಪಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.