ಶ್ರೀರಂಗಪಟ್ಟಣ: ಕೋವಿಡ್–19 ಭೀತಿಯ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ರಂಗನತಿಟ್ಟು ಪಕ್ಷಧಾಮದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪಕ್ಷಿಧಾಮ ಪ್ರವೇಶಿಸುವವರು ಡೆಟಾಲ್ ಮತ್ತು ಬ್ಲೀಚಿಂಗ್ ಮಿಶ್ರಿತ ನೀರಿನಲ್ಲಿ ಕಾಲು ತೊಳೆದುಕೊಂಡು ಒಳಹೋಗುವಂತೆ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಲೋಟಸ್ ಪಾಂಡ್ ಮತ್ತು ಮಹಾರಾಜ ಟವರ್ ಭಾಗದಲ್ಲಿ ಒಂದೊಂದು ಟ್ಯಾಂಕ್ ನಿರ್ಮಿಸಲಾಗಿದೆ. 5 ಅಡಿ ಉದ್ದ ಎರಡೂವರೆ ಅಡಿ ಅಗಲ ಇರುವ ಸಿಮೆಂಟ್ ತೊಟ್ಟಿಗಳಲ್ಲಿ ಸುಮಾರು 3 ಇಂಚು ನೀರು ನಿಲ್ಲುತ್ತದೆ.
ಈ ಟ್ಯಾಂಕ್ನಲ್ಲಿ ದಿನಕ್ಕೆ ಎರಡು, ಮೂರು ಬಾರಿ ಬ್ಲೀಚಿಂಗ್ ಮಿಶ್ರಿತ ನೀರು ತುಂಬಲಾಗುತ್ತದೆ. ಈ ತೊಟ್ಟಿಯಲ್ಲಿ ಪ್ರವಾಸಿಗರು ಕಡ್ಡಾಯವಾಗಿ ಕಾಲು ಅದ್ದಿ ಒಳ ಬರುವಂತೆ ನಿಯಮ ರೂಪಿಸಲಾಗಿದ್ದು, ರೋಗಾಣುಗಳು ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಇಲಾಖೆಯ ಸಿಬ್ಬಂದಿಗೆ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಡಿಎಫ್ಒ ಅಲೆಕ್ಸಾಂಡರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕೆಲವು ಕೊಕ್ಕರೆಗಳು ಕಲುಷಿತ ನೀರಿನ ಕಾರಣಕ್ಕೆ ಸತ್ತಿರಬಹುದು. ರಂಗನತಿಟ್ಟಿನಲ್ಲಿ ನೀರು ಸದಾ ಹರಿಯುತ್ತಿರುತ್ತದೆ. ಹಾಗಾಗಿ ಇಲ್ಲಿರುವ ಪಕ್ಷಿಗಳಿಗೆ ಯಾವುದೇ ಅಪಾಯ ಇಲ್ಲ. ಕೋವಿಡ್–19 ಕಾರಣದಿಂದ ರಂಗನತಿಟ್ಟಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ವಾರ್ಷಿಕ ಪರೀಕ್ಷೆಗಳು ಬಂದಿರುವುದು ಮತ್ತೊಂದು ಕಾರಣ ಎಂದು ಅಲೆಕ್ಸಾಂಡರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.