ಮಂಡ್ಯ: ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದ ಗೇಟ್ ಬಳಿ ಟಿಪ್ಪರ್ ಲಾರಿ ಮತ್ತು ಆಟೊ ನಡುವೆ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೇರಿ ಅವರ ಕುಟುಂಬದ ಐವರು ಮೃಪಟ್ಟಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆ, ದಡದಪುರ ಗ್ರಾಮದ ಮುತ್ತಮ್ಮ(45), ಅವರ ಮಗಳು ಬಸಮ್ಮಣಿ (30), ಮಗ ವೆಂಕಟೇಶ(25), ಬಸಮ್ಮಣಿ ಅವರ ಮಗಳು ಚಾಮುಂಡೇಶ್ವರಿ (8), 2 ವರ್ಷದ ಗಂಡು ಮೃತಪಟ್ಟಿದ್ದಾರೆ. ಮುತ್ತಮ್ಮ ಕುಟುಂಬ ಸದಸ್ಯರೊಂದಿಗೆ ಮದ್ದೂರು ಬಳಿಯ ದೇವಾಲಯಕ್ಕೆ ತೆರಳಿ ವಾಪಸ್ ಬರುವಾಗ ಘಟನೆ ನಡೆದಿದೆ.
ಸಂಜೆ ತೀವ್ರ ಮಳೆ ಸುರಿಯುತ್ತಿದ್ದ ವೇಳೆ ಮಳವಳ್ಳಿಯಿಂದ ಮದ್ದೂರಿನತ್ತ ವೇಗವಾಗಿ ತೆರಳುತ್ತಿದ್ದ ಟಿಪ್ಪರ್ ಲಾರಿ ಆಟೊಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೊ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮುತ್ತಮ್ಮ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಎಎಸ್ಪಿ ಧನಂಜಯ್, ಗ್ರಾಮಾಂತರ ಸಿಪಿಐ ಎ.ಕೆ.ರಾಜೇಶ್, ಇನ್ಸ್ಪೆಕ್ಟರ್ ಟಿ.ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಕೈಕ ಅಧ್ಯಕ್ಷೆ: ಕೊರಮ ಸಮಾಜಕ್ಕೆ ಸೇರಿದ್ದ ಮುತ್ತಮ್ಮ ಅವರ ಸಮಾಜದಿಂದ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹುದ್ದೆಗೇರಿದ್ದರು. ಆ ಮೂಲಕ ರಾಜ್ಯ ಪ್ರಥಮ ಕೊರಮ ಸಮಾಜದ ಗ್ರಾ.ಪಂ ಅಧ್ಯಕ್ಷೆ ಎಂದು ಪ್ರಸಿದ್ಧಿ ಪಡೆದಿದ್ದರು. ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾಗ ವಿಧಾಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದೆ ಸುಮಲತಾ ಅಭಿನಂದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.