ಪಾಂಡವಪುರ: ಮಂಡ್ಯ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೇಲುಕೋಟೆಯಲ್ಲಿ ಜ.31 ಮತ್ತು ಫೆ.1ರಂದು ನಡೆಸಲಾಗುವುದು ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ಜಿಲ್ಲಾ ಘಟಕದ ಒಪ್ಪಿಗೆಯ ಮೇರೆಗೆ ಪಾಂಡವಪುರ ತಾಲ್ಲೂಕಿನ ಮೇಲು ಕೋಟೆಯಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ಸಮ್ಮೇಳನದ ನೆನಪಿಗೆ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು. ಸಾಹಿತಿ ಡಾ. ಬೋರೇಗೌಡ ಚಿಕ್ಕ ಮರಳಿ ಹಾಗೂ ಲೇಖಕ ಪ್ರೊ.ಬಿ. ನಾರಾಯಣ ಗೌಡ ಅವರಿಗೆ ಈ ಜವಾಬ್ದಾರಿ ನೀಡ ಲಾಗಿದೆ. ಸಮ್ಮೇಳನ ವನ್ನು ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಉದ್ಫಾಟಿಸಲಿದ್ದಾರೆ. ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಭಾಗವಹಿಸಲಿದ್ದು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಸಾಹಿತ್ಯ, ಸಂವಾದ, ವಿಚಾರ, ಕವಿಗೋಷ್ಠಿ ಸೇರಿದಂತೆ ಹಲವು ಗೋಷ್ಠಿಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಹುಸ್ಕೂರು ಕೃಷ್ಣೇಗೌಡ, ವಿ.ವೆಂಕಟ ರಾಮೇಗೌಡ, ಎಂ.ಬಿ.ರಮೇಶ್, ಶಿವರಾಜು, ಹಿರೇಮರಳಿ ಚನ್ನೇಗೌಡ, ಮಂಜುನಾಥ್, ಹಿರೇಮರಳಿ ರಮೇಶ್, ಚಲುವೇಗೌಡ, ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ, ಲೇಖಕ ಪ್ರೊ.ಬಿ.ನಾರಾಯಣಗೌಡ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.