
ಮಂಡ್ಯ: ಮಕರ ಸಂಕ್ರಾಂತಿ ಹಬ್ಬವನ್ನು ಜಿಲ್ಲೆಯಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಹೆಣ್ಣು ಮಕ್ಕಳು ಎಳ್ಳು–ಬೆಲ್ಲ ಹಂಚಿದರೆ, ಅತ್ತ ಯುವ ಸಮೂಹವು ದನಗಳ ಕಿಚ್ಚು ಹಾಯಿಸುವ ಮೂಲಕ ಗುರುವಾರ ಹಬ್ಬದ ಮೆರುಗು ಹೆಚ್ಚುವಂತೆ ಮಾಡಿದರು.
ಹೆಣ್ಣು ಮಕ್ಕಳು ಮನೆ–ಮನೆಗೆ ತೆರಳಿ ಎಳ್ಳು–ಬೆಲ್ಲ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಹೊಸಬಟ್ಟೆ ಧರಿಸಿದ ಯುವಕ–ಯುವತಿಯರು ಸೆಲ್ಫಿ ಮತ್ತು ಗ್ರೂಪ್ ಫೋಟೊಗಳನ್ನು ತೆಗೆದುಕೊಂಡು ಸಂಭ್ರಮಿಸಿದರು.
ಬಣ್ಣ ಬಣ್ಣಗಳಿಂದ ಸಿಂಗರಿಸಿದ ರಾಸುಗಳ ಜೊತೆ ಬರುತ್ತಿದ್ದ ಯುವಕರು ಕಿಚ್ಚು ಹಾಯಿಸುವ ಸರತಿ ಬಂದಾಗ ಮುನ್ನುಗ್ಗಿ ಬೆಂಕಿಯನ್ನು ದಾಟಲು ಜಿಗಿದು ಓಡುತ್ತಿದ್ದರು. ಇದನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಜನರು ಶಿಳ್ಳೆ, ಚಪ್ಪಾಳೆಗಳ ಮೂಲಕ ಹರ್ಷೋದ್ಗಾರ ಮಾಡಿದರು.
ತಾಲ್ಲೂಕಿನ ಸಾತನೂರು, ಚಿಕ್ಕಮಂಡ್ಯ, ಮಂಗಲ, ಹನಿಯಂಬಾಡಿ, ಪಣಕನಹಳ್ಳಿ, ಚಿಕ್ಕಬಳ್ಳಿ, ಉಮ್ಮಡಹಳ್ಳಿ, ಗೋಪಾಲಪುರ, ಕಾಳೇನಹಳ್ಳಿ, ಎಲೆಚಾಕನಹಳ್ಳಿ, ಇಂಡುವಾಳು, ಕೀಲಾರ, ಕೆರಗೋಡು, ದೊಡ್ಡ ಬಾಣಸವಾಡಿ, ಸುಂಡಹಳ್ಳಿ, ಯಲಿಯೂರು, ತೂಬಿನಕೆರೆ ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿಯೂ ರಾಸುಗಳನ್ನು ಕಿಚ್ಚು ಹಾಯಿಸಲಾಯಿತು.
ಮೂವರಿಗೆ ಗಾಯ: ನಗರದ ಹೊಸಹಳ್ಳಿ ಗ್ರಾಮದಲ್ಲಿ ಕಿಚ್ಚು ಹಾಯಿಸುವ ಸಂದರ್ಭದಲ್ಲಿ ಮತ್ತೊಂದು ದನದ ಕೊಂಬು ತಲೆಗೆ ಬಡಿದ ಪರಿಣಾಮ ಕಾರಸವಾಡಿ ಗ್ರಾಮದ ತಮ್ಮೇಗೌಡ ಅವರು ಗಾಯಗೊಂಡರು. ನಂತರ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಂದು ಕರೆದುಕೊಂಡು ಹೋಗಲಾಯಿತು. ಮಂಡ್ಯ ತಾಲ್ಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ಅಂಗವಾಗಿ ರಾಸುಗಳ ಕಿಚ್ಚು ಹಾಯಿಸುವ ವೇಳೆ ಇಬ್ಬರು ಬಿದ್ದು ಗಾಯಗೊಂಡರು
ಮನೆ–ಮನೆಗೆ ತೆರಳಿ ಎಳ್ಳು–ಬೆಲ್ಲ ವಿತರಿಸಿ ಶುಭಾಶಯ ವಿನಿಮಯ ರಾಸುಗಳನ್ನು ಹುರಿದುಂಬಿಸಿದ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಹೊಸಹಳ್ಳಿ ಗ್ರಾಮದಲ್ಲಿ ಮೂವರಿಗೆ ಗಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.