ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದಲ್ಲಿ ಸಗಣಿ ಓಕುಳಿ ಹಬ್ಬವನ್ನು ಈಚೆಗೆ ಸಡಗರದಿಂದ ಆಚರಿಸಲಾಯಿತು.
ಜಂಗಮ ಹಾಗೂ ಸೋಮೇಶ್ವರನಿಗೆ ಭಕ್ತಿಯ ವಿಷಯದಲ್ಲಿ ಪಂಥವೇರ್ಪಟ್ಟು ಶಿವನಿಗೆ ಸೋಲಾಗಿ ಜಂಗಮನಿಗೆ ಜಯವಾದ ಸಲುವಾಗಿ ಈ ಹಬ್ಬವನ್ನು ವರ್ಷಕ್ಕೊಮ್ಮೆ ಆಚರಿಸುವುದು ರೂಢಿ. ಶಿವಭಕ್ತರಾದ ಜಂಗಮರಾಗಿ ಸಾಸಲುಕೊಪ್ಪಲುವಿನ ಹಾಲುಮತಸ್ಥ ಯುವಕರು, ಶಿವನ ಪರವಾಗಿ ಸಾಸಲು ಗ್ರಾಮದ ವೀರಶೈವ ಪಂಗಡದ ಯುವಕರು ಸಗಣಿ ಕಾಳಗದಲ್ಲಿ ಭಾಗವಹಿಸಿದ್ದರು.
ಎರಡು ಗುಂಪಿನ ಯುವಕರು ರಾಶಿ ರಾಶಿಯಾಗಿ ಬಿದ್ದಿದ್ದ ಸಗಣಿಯನ್ನು ಉಂಡೆಗಳಾಗಿ ಕಟ್ಟಿಕೊಂಡು ಹೋರಾಟಕ್ಕೆ ಸಜ್ಜಾದರು. ಪರಸ್ಪರ ಸಗಣಿಯ ಉಂಡೆಯನ್ನು ಬಿರುಸಿನಿಂದ ಎದುರಾಳಿಗಳಿಗೆ ಬೀಸಿದರು. ಅಂತಿಮವಾಗಿ ಭಕ್ತ ಜಂಗಮರ ಗುಂಪಾದ ಸಾಸಲುಕೊಪ್ಪಲು ಗುಂಪಿನ ಯುವಕರು ವಿಜೇತರಾದರು.
ಎರಡು ಗುಂಪಿನವರು ಪುಷ್ಕರಿಣಿ ಯಲ್ಲಿ ಮಿಂದು ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.