ಮಳವಳ್ಳಿ: ಪಟ್ಟಣದಲ್ಲಿ ಜಾರಿಯಲ್ಲಿ ಇರುವ 24X7 ಕುಡಿಯುವ ನೀರಿನ ಯೋಜನೆಯಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಆಗದ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿರುವ ಕಾರಣ ಶಾಸಕ ಡಾ.ಕೆ.ಅನ್ನದಾನಿ ಶುಕ್ರವಾರ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.
ಪಟ್ಟಣದ ಪುರಸಭೆ 3 ಮತ್ತು 4ನೇ ವಾರ್ಡ್ಗಳಿಗೆ ಬೆಳಿಗ್ಗೆ 6 ಗಂಟೆಗೆ ತೆರಳಿದ ಶಾಸಕರು, ನಲ್ಲಿಗಳಲ್ಲಿ ನೀರಿನ ಪ್ರಮಾಣ ಪರೀಕ್ಷಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.
ಶಾಸಕರ ಭೇಟಿ ವೇಳೆ ಬಹುತೇಕ ನಿವಾಸಿಗಳು ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದರು. ನಮಗೆ ಕನಿಷ್ಠ ದಿನಕ್ಕೆ ಒಂದು ಗಂಟೆಯೂ ಕುಡಿಯುವ ನೀರು ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಶಾಸಕ ಡಾ.ಕೆ.ಅನ್ನದಾನಿ ಮಾತ ನಾಡಿ, ಪೈಪ್ ಲೈನ್ ಸಮಸ್ಯೆಯಿಂದ ಈ ರೀತಿ ಆಗಿದೆ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದು, ಶಾಶ್ವತವಾಗಿ ಸಮಸ್ಯೆಗೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಪಟ್ಟಣದ ಯಾವುದೇ ವಾರ್ಡ್ಗಳಲ್ಲಿ ಇಂಥ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಎಲ್ಲ ವಾರ್ಡ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಕಾಮಗಾರಿಗಳ ನೆಪದಲ್ಲಿ ಯಾವುದೇ ರಸ್ತೆಗಳನ್ನು ಅಗೆದರೂ, ಅದೇ ಇಲಾಖೆಯವರೇ ರಸ್ತೆ ಸರಿಪಡಿಸಬೇಕು. ಇಲ್ಲದೆ ಇದ್ದರೆ ಅವರಿಂದ ಹಣ ವಸೂಲಿ ಮಾಡಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಪುರಸಭೆ ಉಪಾಧ್ಯಕ್ಷ ಟಿ.ನಂದ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ, ಮುಖ್ಯಾಧಿಕಾರಿ ಕೆ.ಎಂ.ಪವನ್ ಕುಮಾರ್, ಎಂಜಿನಿಯರ್ ಪುಟ್ಟಯ್ಯ, ಮುಖಂಡರಾದ ನಾಗರಾಜು, ಕೃಷ್ಣ, ಕುಮಾರ್ ಈ ಸಂದರ್ಭದಲ್ಲಿ ಇದ್ದರು.
ನೀರು ಹರಿಸಿ
ಮಳವಳ್ಳಿ: ಈ ಬಾರಿ ಉತ್ತಮ ಮಳೆಯಿಂದಾಗಿ ಕೆಆರ್ಎಸ್ ಜಲಾಶಯ ತುಂಬಿದ್ದು, ಹಾಲಿ ಇರುವ ಬೆಳೆಗಳು ಒಣಗುತ್ತಿವೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಾಲೆಗಳಿಗೆ ನೀರು ಹರಿಸಬೇಕು ಎಂದು ಶಾಸಕ ಡಾ.ಕೆ.ಅನ್ನದಾನಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆಗಳು ಒಣಗುವ ಸ್ಥಿತಿಯ ಲ್ಲಿದ್ದು, ಎಲ್ಲ ನಾಲೆಗಳಿಗೆ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.