ADVERTISEMENT

ಶ್ರೀರಂಗಪಟ್ಟಣ: ಸಂಕ್ರಾಂತಿಗೆ ವಿಶೇಷ ಕಾರ್ಯಕ್ರಮ

ಪಟ್ಟಣದ ವಿವಿಧ ತಾಣಗಳನ್ನು ವೀಕ್ಷಿಸಿದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರುತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 2:18 IST
Last Updated 18 ಡಿಸೆಂಬರ್ 2020, 2:18 IST
ಶ್ರೀರಂಗಪಟ್ಟಣಕ್ಕೆ ಗುರುವಾರ ಭೇಟಿ ನೀಡಿದ್ದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರುತಿ ‘ಅಂಬಾರಿ’ ವಾಹನದಲ್ಲಿ ಕುಳಿತು ಸ್ಮಾರಕಗಳನ್ನು ವೀಕ್ಷಿಸಿದರು
ಶ್ರೀರಂಗಪಟ್ಟಣಕ್ಕೆ ಗುರುವಾರ ಭೇಟಿ ನೀಡಿದ್ದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರುತಿ ‘ಅಂಬಾರಿ’ ವಾಹನದಲ್ಲಿ ಕುಳಿತು ಸ್ಮಾರಕಗಳನ್ನು ವೀಕ್ಷಿಸಿದರು   

ಶ್ರೀರಂಗಪಟ್ಟಣ: ‘ಪಟ್ಟಣಕ್ಕೆ ದೇಶ, ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಸಂಕ್ರಾಂತಿ ವೇಳೆಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು’ ಎಂದು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರುತಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಅಂಬಾರಿ ವಾಹನದಲ್ಲಿ ಕುಳಿತು ವಿವಿಧ ತಾಣ ವೀಕ್ಷಿಸಿ ಅವರು ಮಾತನಾಡಿದರು.

‘ಮೊದಲ ಹಂತವಾಗಿ ಪ್ರವಾಸಿಗರು ಐತಿಹಾಸಿಕ ಮತ್ತು ಪ್ರಾಕೃತಿಕ ತಾಣ ಗಳನ್ನು ಸುಲಭವಾಗಿ ವೀಕ್ಷಿಸಲು ಅನು ಕೂಲ ಆಗುವಂತೆ ಡಬಲ್‌ ಡೆಕ್ಕರ್‌ ವಾಹನ ಸಿದ್ಧಪಡಿಸಲಾಗಿದೆ. ಅಂಬಾರಿ ಎಂದು ಹೆಸರಿಡಲಾಗಿದೆ. ಶ್ರೀರಂಗ ಪಟ್ಟಣದಿಂದ ಈ ವಾಹನವನ್ನು ಪರಿ ಚಯಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘27 ವರ್ಷಗಳಿಂದ ಚಲನಚಿತ್ರಗಳಲ್ಲಿ ನಟಿಸುತ್ತಿದ್ದು, 100ಕ್ಕೂ ಹೆಚ್ಚು ಚಿತ್ರಗಳು ಈ ಊರಿನ ಆಸುಪಾಸಿನಲ್ಲಿ ಚಿತ್ರೀಕರಣಗೊಂಡಿವೆ. ಹಾಗಾಗಿ ಈ ಸ್ಥಳದ ಮಹತ್ವ ಗೊತ್ತಿದೆ. ಇಲ್ಲಿ ವರ್ಷ ಪೂರ್ತಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಆಲೋಚನೆ ಇದೆ. ಅಧಿಕಾರಿಗಳ ಜತೆ ಈಗಾಗಲೇ ಚರ್ಚೆ ನಡೆದಿದೆ. ಈ ಊರಿನ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯ ಕಾರ್ಯಕ್ರಮ ರೂಪಿಸ ಲಾಗುವುದು’ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಜಿಲ್ಲೆಯವರಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರವೂ ಇದೆ’ ಎಂದರು.

‘ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಖಾಲಿ ಬಿದ್ದಿರುವ ಪ್ರವಾಸೋದ್ಯಮ ಇಲಾಖೆಯ ಕಟ್ಟಡವನ್ನು ಬಳಕೆಗೆ ಯೋಗ್ಯವಾಗುವಂತೆ ಸಿದ್ಧಗೊಳಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಕುಳಿತು ಆನೆಕೋಟೆ, ಶ್ರೀರಂಗನಾಥಸ್ವಾಮಿ ದೇಗುಲ, ಸೋಪಾನಕಟ್ಟೆ ಸ್ಥಳಗಳನ್ನು ಅಧಿಕಾರಿಗಳು ಹಾಗೂ ಸ್ಥಳೀಯ ಬಿಜೆಪಿ ಮುಖಂಡರ ಜತೆಗೂಡಿ ವೀಕ್ಷಿಸಿದರು.

ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್‌ ಎಂ.ವಿ.ರೂಪಾ, ನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್‌, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳಾದ ವೇಣುಗೋಪಾಲ್‌, ಶ್ರೀನಿವಾಸ್‌, ಯೋಗೇಶ್‌, ಬಿಜೆಪಿ ಮುಖಂಡರಾದ ಟಿ.ಶ್ರೀಧರ್‌, ಎಸ್‌.ಕೆ.ಮಂಜುನಾಥ್‌, ಪುಟ್ಟರಾಮು, ಇಂದ್ರಕುಮಾರ್‌, ವಿದ್ಯಾ ಉಮೇಶ್‌ ಜತೆಗಿದ್ದರು.

ಚಂದ್ರವನದಲ್ಲಿ ಮಡಿಲಕ್ಕಿ: ಶೃತಿ ಅವರು ಚಂದ್ರವನ ಆಶ್ರಮಕ್ಕೆ ಭೇಟಿ ನೀಡಿದರು. ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರಿಂದ ಸನ್ಮಾನ ಮತ್ತು ಮಡಿಲಕ್ಕಿ ಸ್ವೀಕರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸ್ವಾಮೀಜಿ ಜತೆ ಪ್ರವಾ ಸೋದ್ಯಮ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಆಶ್ರಮದ ಕಾರ್ಯದರ್ಶಿ ಟ.ಪಿ.ಶಿವಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.