ಮೇಲುಕೋಟೆ: ಚೆಲುವನಾರಾಯಣ ಸ್ವಾಮಿಯ 4ನೇ ತಿರುನಾಳ್ ಶ್ರೀಕೃಷ್ಣ ರಾಜಮುಡಿ ಉತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಮಂಡ್ಯ ಜಿಲ್ಲಾ ಖಜಾನೆಯಿಂದ ಪೊಲೀಸ್ ಭದ್ರತೆಯೊಂದಿಗೆ ಬಂದ ವಜ್ರಖಚಿತ ಶ್ರೀಕೃಷ್ಣ ರಾಜಮುಡಿ ಕಿರೀಟವನ್ನು ದೇವಸ್ಥಾನದಲ್ಲಿ ಭಕ್ತಿಯಿಂದ ಸ್ವಾಗತಿಸಲಾಯಿತು. ಬಳಿಕ ಕಿರೀಟವನ್ನು ವೇದಾಂತ ದೇಶಿಕರ ಸನ್ನಿಧಿಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಾಯಿತು.
ಶ್ರೀದೇವಿ ಮತ್ತು ಭೂದೇವಿ ಅಮ್ಮನವರ ಸಮೇತ ಗರುಡಾರೂಢ ನಾದ ಚೆಲುವನಾರಾಯಣ ಸ್ವಾಮಿಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ಧಾರಣೆ ಮಾಡಲಾಯಿತು. ವಿವಿಧ ಆಭರಣ, ಹೂಗಳಿಂದ ಸ್ವಾಮಿಯನ್ನು ಅಲಂಕರಿಸಲಾಗಿತ್ತು. ಗರುಡದೇವನಿಗೆ ಮೆರವಣಿಗೆ ಮಾಡಿದ ನಂತರ ಮಹಾ ಮಂಗಳಾರತಿ ನೆರವೇರಿಸಿ, ಕೃಷ್ಣ ರಾಜಮುಡಿ ಉತ್ಸವಕ್ಕೆ ಚಾಲನೆ ನೀಡ ಲಾಯಿತು. ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ತಹಶೀಲ್ದಾರ್ ಎಸ್.ಎಲ್.ನಯನಾ, ದೇವಾಲಯದ ಇಒ ಮಂಗಳಮ್ಮ ಇದ್ದರು.
ಮೈಸೂರು ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ಮನೆ ದೇವರು ಚೆಲುವನಾರಾಯಣ ಸ್ವಾಮಿಗೆ ಕೆಂಪು, ಬಿಳಿ ವಜ್ರದ ಪಚ್ಚೆಮಣಿಯ ಸಿಂಹಲಾಂಛನವುಳ್ಳ ಕೃಷ್ಣರಾಜಮುಡಿ ಅರ್ಪಿಸಿದ್ದರು. ಜಿಲ್ಲಾ ಖಜಾನೆಯಿಂದ ಹೊರಟ ಕೃಷ್ಣರಾಜಮುಡಿ ತಿರುವಾ ಭರಣ ಪೆಟ್ಟಿಗೆಯನ್ನು ಶಿವಳ್ಳಿ, ದುದ್, ಜಕ್ಕನಹಳ್ಳಿ ಸರ್ಕಲ್ ಮಾರ್ಗವಾಗಿ ಮೇಲುಕೋಟೆಗೆ ತರಲಾಯಿತು.
ಕೃಷ್ಣರಾಜಮುಡಿ ಕಿರೀಟವನ್ನು ಜುಲೈ 25ರವರೆಗೆ ಪ್ರತಿದಿನ ಸಂಜೆ ವಿವಿಧ ಉತ್ಸವದಲ್ಲಿ ಚೆಲುವರಾಯಸ್ವಾಮಿ ಯನ್ನು ಅಲಂಕರಿಸಿ ಪೂಜಿಸಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.