ADVERTISEMENT

ಶ್ರೀರಂಗಪಟ್ಟಣ; ಮಳೆಗೆ ಆನೆಕೋಟೆ ಕುಸಿತ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 12:18 IST
Last Updated 30 ಆಗಸ್ಟ್ 2022, 12:18 IST
ಶ್ರೀರಂಗಪಟ್ಟಣದ ಐತಿಹಾಸಿಕ ಸ್ಮಾರಕ ಆನೆಕೋಟೆ ಕುಸಿದಿರುವುದು
ಶ್ರೀರಂಗಪಟ್ಟಣದ ಐತಿಹಾಸಿಕ ಸ್ಮಾರಕ ಆನೆಕೋಟೆ ಕುಸಿದಿರುವುದು   

ಶ್ರೀರಂಗಪಟ್ಟಣ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಆನೆಕೋಟೆ ದ್ವಾರಕ್ಕೆ ಅನತಿ ದೂರದಲ್ಲಿ ಕೋಟೆಯ ಒಂದು ಭಾಗ ಮಂಗಳವಾರ ಬೆಳಿಗ್ಗೆ ಕುಸಿದಿದೆ.

ಜಿಲ್ಲಾಡಳಿತ ನಡೆಸುವ ಧ್ವನಿ ಮತ್ತು ಬೆಳಕು ಯೋಜನೆ ಪ್ರದೇಶದಲ್ಲೇ ಐತಿಹಾಸಿಕ ಕೋಟೆ ಕುಸಿತ ಕಂಡಿದೆ. ಸುಮಾರು 25 ಅಡಿ ಉದ್ದ ಕೋಟೆ ಕುಸಿದಿದ್ದು, ಕಲ್ಲು ಮತ್ತು ಇಟ್ಟಿಗೆಗಳು ಕಂದಕಕ್ಕೆ ಬಿದ್ದಿವೆ. ಆದರೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಸ್ಮಾರಕಗಳ ಮಾದರಿಗಳಿಗೆ ಯಾವುದೇ ಹಾನಿಯಾಗಿಲ್ಲ.

‘ಪ್ರಾಚ್ಯವಸ್ತು ಇಲಾಖೆ ಕೋಟೆ ಮೇಲೆ ಬೆಳೆದಿರುವ ಗಿಡ ಗಂಟಿಗಳನ್ನು ಸ್ವಚ್ಛಗೊಳಿಸದ ಕಾರಣ ಅವುಗಳ ಬೇರು ಹಬ್ಬಿ ಕೋಟೆಯ ಅಸ್ಥಿತ್ವಕ್ಕೆ ಧಕ್ಕೆ ತರುತ್ತಿವೆ. ಕೋಟೆ ಕುಸಿಯಲು ಇದೇ ಕಾರಣವಾಗಿದೆ’ ಎಂದು ಪಟ್ಟಣದ ನಿವಾಸಿ ಜಿ.ಇ. ಸುಧಾಕರ್ ದೂರಿದ್ದಾರೆ.

ADVERTISEMENT

‘300 ವರ್ಷಗಳಷ್ಟು ಹಳೆಯದಾದ ಕೋಟೆ ಇದಾಗಿದ್ದು, ಸತತವಾಗಿ ಸುರಿಯುತ್ತಿರುವ ಮಳೆಗೆ ಶಿಥಿಲವಾಗಿ ಕುಸಿದಿದೆ. ಕುಸಿದಿರುವ ಭಾಗವನ್ನು ದುರಸ್ತಿ‌ ಮಾಡಲು ಕ್ರಮ ವಹಿಸಲಾಗುವುದು’ ಎಂದು ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯ ಎಂಜಿನಿಯರ್ ಕುಬೇರಪ್ಪ ತಿಳಿಸಿದರು.

ಮುಂದುವರಿದ ಮಳೆ: ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಸುರಿದ ಮಳೆಗೆ ಮನೆಗಳು ಕುಸಿದಿವೆ. ಲೋಕಪಾವನಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಿರಿಕೊಪ್ಪಲು ಗ್ರಾಮದ ಜಮೀನುಗಳು ಜಲಾವೃತವಾಗಿವೆ. ಕೆ.ಆರ್‌.ಪೇಟೆ ತಾಲ್ಲೂಕು ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಒಂದು ಮನೆ ಕುಸಿದಿದ್ದು ನಿವಾಸಿಗಳು ಅದೃಷ್ಟವಶಾತ್‌ ಪಾರಾಗಿದ್ದಾರೆ.

ನಾಗಮಂಗಲ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ ಜಲಾವೃತವಾಗಿದ್ದು 40ಕ್ಕೂ ಹೆಚ್ಚು ಬಸ್‌ಗಳು ನೀರಿನಲ್ಲಿ ಮುಳುಗಿದ್ದವು. ಮಂಗಳವಾರ ಬೆಳಿಗ್ಗೆ ನೀರು ತೆರವುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.