
ಶ್ರೀರಂಗಪಟ್ಟಣ: ಪಟ್ಟಣದ ಚಂದಗಾಲು ರಸ್ತೆಯಲ್ಲಿರುವ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಘಟಕಕ್ಕೆ ಕೊಳಚೆ ನೀರು ಸೇರುವುದನ್ನು ತಡೆಯಲು ಈಚೆಗೆ ಬಂಡ್ ನಿರ್ಮಿಸಲಾಯಿತು.
ಮೈಸೂರು ಕಡೆಯಿಂದ ಹರಿದು ಬರುವ ಕಲುಷಿತ ನೀರು ನೇರವಾಗಿ ನದಿಗೆ ಸೇರುತ್ತಿದ್ದು, ಅದು ನೀರೆತ್ತುವ ಘಟಕದತ್ತ ಹರಿಯದಂತೆ ಅಡ್ಡಲಾಗಿ ಸಿಮೆಂಟ್ ಬ್ಲಾಕ್, ಕಲ್ಲು ಮತ್ತು ಗ್ರಾವಲ್ ಮಣ್ಣಿನಿಂದ ಬಂಡ್ ನಿರ್ಮಿಸಲಾಯಿತು. ಸುಮಾರು 200 ಅಡಿ ಉದ್ದದಷ್ಟು ಬಂಡ್ ನಿರ್ಮಾಣ ಮಾಡಲಾಯಿತು.
‘ಪಟ್ಟಣದ ಕೋಟೆಯ ಹೊರಗೆ ಇರುವ ಗಂಜಾಂ ಮತ್ತು ಇತರ ಬಡಾವಣೆಗಳಿಗೆ ಚಂದಗಾಲು ರಸ್ತೆಯಲ್ಲಿರುವ ಕಾವೇರಿ ನದಿಯಿಂದ ನೀರು ಎತ್ತುವಳಿ ಮಾಡಲಾಗುತ್ತಿತ್ತು. ನದಿಗೆ ಕಲುಷಿತ ನೀರು ಸೇರುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಸೂಚನೆ ಮೇರೆಗೆ ಬಂಡ್ ನಿರ್ಮಿಸಿ ನೀರು ಎತ್ತುವಳಿ ಮಾಡುವ ಘಟಕಕ್ಕೆ ಕೊಳಚೆ ನೀರು ಸೇರುವುದನ್ನು ತಡೆಯಲಾಗಿದೆ. ಸದ್ಯ ಶುದ್ಧ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಪುರಸಭೆ ಎಂಜಿನಿಯರ್ ಮುರಳಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.