
ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಮತ್ತು ಕಾರೇಕುರ ಗ್ರಾಮಗಳ ಕೃಷಿ ಭೂಮಿಗೆ ನೀರುಣಿಸುವ ವಿರಿಜಾ ವಿತರಣಾ ನಾಲೆಯನ್ನು ಎರಡೂ ಗ್ರಾಮಗಳ ರೈತರು ಭಾನುವಾರ ಸ್ವಚ್ಛಗೊಳಿಸಿದರು.
ಬೆಳಗೊಳ ಸಮೀಪದ ಬಲಮುರಿ ಬಳಿ ಕಾವೇರಿ ನದಿಯಿಂದ ಆರಂಭವಾಗುವ ವಿರಿಜಾ ನಾಲೆಯ 4ನೇ ಮೈಲಿಯ ಕಾಲುವೆಯನ್ನು ಸ್ವಚ್ಛಗೊಳಿಸಿದರು.
ವಿತರಣಾ ನಾಲೆಯಲ್ಲಿ ತುಂಬಿದ್ದ ಹೂಳನ್ನು ತೆಗೆದು ಸಾಗಿಸಿದರು. ಆಳೆತ್ತರ ಬೆಳೆದಿದ್ದ ಕಳೆ ಗಿಡಗಳನ್ನು ಕಿತ್ತರು. ಒಂದು ಕಿ.ಮೀ. ಉದ್ದದಷ್ಟು ನಾಲೆಯ ಸ್ವಚ್ಛತೆ ಕೈಗೊಂಡರು. ನಾಲೆಯ ಸ್ವಚ್ಛತೆಯಿಂದ ಕಡೇ ಭಾಗದವರೆಗೆ ನೀರು ಹರಿಯಲು ಅನುಕೂಲವಾಗಿದೆ.
‘ವಿರಿಜಾ ನಾಲೆಯ 4ನೇ ಮೈಲಿಯ ವಿತರಣಾ ನಾಲೆ ಬೆಳಗೊಳ ಮತ್ತು ಕಾರೇಕುರ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ. ಆದರೆ ಈ ನಾಲೆಯನ್ನು ನಿರ್ವಹಣೆ ಮಾಡದ ಕಾರಣ ಮುಂದಿನ ಭಾಗಕ್ಕೆ ನೀರು ಹರಿಯದೆ ರೈತರು ತೊಂದರೆ ಅನುಭವಿಸುತ್ತಿದ್ದೇವೆ. ಈ ನಾಲೆಯನ್ನು ಸಿಮೆಂಟೀಕರಣ ಮಾಡುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ರೈತ ಬೆಳಗೊಳ ವಿಷಕಂಠು ದೂರಿದರು.
‘ಈ ವಿತರಣಾ ನಾಲೆಯಲ್ಲಿ ಹೂಳು ತುಂಬಿಕೊಂಡು ವಿಪರೀತ ಕಳೆ ಗಿಡಗಳು ಬೆಳೆದಿದ್ದವು. ನೀರಾವರಿ ಇಲಾಖೆ ನಾಲೆ ಸ್ವಚ್ಛ ಮಾಡದ ಕಾರಣ ರೈತರೇ ಶ್ರಮದಾನ ಮಾಡಿ ನೀರು ಹರಿಯುವಂತೆ ಮಾಡಿದ್ದೇವೆ’ ಎಂದು ಕಾರೇಕುರ ಗ್ರಾಮದ ರೈತ ಯೋಗೇಶ್ ಹೇಳಿದರು.
ರವಿಕುಮಾರ್, ರಾಜು, ಮುರಳಿ, ಚಂದ್ರು, ನಾಗರಾಜು, ಮಹದೇವು, ವಂಕಟೇಶ್ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.