ADVERTISEMENT

ಶ್ರೀರಂಗಪಟ್ಟಣ| ರೇಷ್ಮೆ ಗೂಡಿಗೆ ಬಂಪರ್‌ ಬೆಲೆ: ಪ್ರೊ. ದಯಾನಂದ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:59 IST
Last Updated 18 ಫೆಬ್ರುವರಿ 2026, 5:59 IST
ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಾಲು ಗ್ರಾಮದಲ್ಲಿ ಮೈಸೂರಿನ ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವವನ್ನು ಮೈಸೂರಿನ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಪ್ರಭಾರ ನಿರ್ದೇಶಕ ಪ್ರೊ. ದಯಾನಂದ್ ಉದ್ಘಾಟಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಾಲು ಗ್ರಾಮದಲ್ಲಿ ಮೈಸೂರಿನ ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವವನ್ನು ಮೈಸೂರಿನ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಪ್ರಭಾರ ನಿರ್ದೇಶಕ ಪ್ರೊ. ದಯಾನಂದ್ ಉದ್ಘಾಟಿಸಿದರು   

ಶ್ರೀರಂಗಪಟ್ಟಣ: ‘ಈಚಿನ ದಿನಗಳಲ್ಲಿ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಬಂಪರ್‌ ಬೆಲೆ ಸಿಗುತ್ತಿದ್ದು ರೈತರು ರೇಷ್ಮೆ ಬೆಳೆಯತ್ತ ಮನಸ್ಸು ಮಾಡಬೇಕು’ ಎಂದು ಮೈಸೂರಿನ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಪ್ರಭಾರ ನಿರ್ದೇಶಕ ಪ್ರೊ. ದಯಾನಂದ್ ಹೇಳಿದರು.

ತಾಲ್ಲೂಕಿನ ಚಂದಗಾಲು ಗ್ರಾಮದಲ್ಲಿ ಮೈಸೂರಿನ ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. ‘ದ್ವಿತಳಿ (ಬೈವೋಲ್ಟೀನ್‌) ರೇಷ್ಮೆ ಗೂಡಿಗೆ, ಪ್ರತಿ ಕೆ.ಜಿ.ಗೆ ಮಾರುಕಟ್ಟೆಯಲ್ಲಿ ₹800ರಿಂದ ₹1000 ಬೆಲೆ ಸಿಗುತ್ತಿದೆ. ಹಳದಿ ಗೂಡಿಗೆ ₹600ರಿಂದ ₹700 ಬೆಲೆ ಇದೆ. ಸರ್ಕಾರಿ ಮಾರಾಟ ಕೇಂದ್ರಗಳಲ್ಲಿ ರೇಷ್ಮೆ ಗೂಡು ಮಾರಾಟ ಮಾಡಿದರೆ ಪ್ರತಿ ಕೆ.ಜಿ ಗೆ ₹ 30 ಬೋನಸ್‌ ಕೂಡ ಸಿಗಲಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಹಿಪ್ಪು ನೇರಳೆ ಬೆಳೆದು ರೇಷ್ಮೆ ಗೂಡು ಉತ್ಪಾದಿಸಿದರೆ ಲಕ್ಷಗಟ್ಟಲೆ ಆದಾಯ ಗಳಿಸಬಹುದು’ ಎಂದು ತಿಳಿಸಿದರು.

ರೇಷ್ಮೆ ಇಲಾಖೆಯ ತಳಿ ವಿಜ್ಞಾನಿ ಪ್ರೊ.ಜಾಯ್ಸಿರಾಣಿ ರೇಷ್ಮೆ ಬೆಳೆಯ ವೈಜ್ಞಾನಿಕ ಕ್ರಮಗಳನ್ನು ತಿಳಿಸಿಕೊಟ್ಟರು. ಮೈಸೂರು ಮಡಿಕಲ್‌ ಕಾಲೇಜು ವತಿಯಿಂದ ರೈತರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಮೈಸೂರು ಮೆಡಿಕಲ್‌ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗ ಮುಖ್ಯಸ್ಥ ಡಾ.ಮನ್ಸೂರ್‌ ಅಹಮದ್‌ ಹಾಗೂ ಡಾ.ಎಂ.ಎಂ. ಸುಮಂತ್ ಪೀಡೆ ನಾಶಕ ಬಳಕೆ, ತಂಬಾಕು ಸೇವನೆ, ರಾಸಾಯನಿಯುಕ್ತ ಆಹಾರ ಸೇವನೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದರು.

ADVERTISEMENT

ಹಾವು ಕಚ್ಚಿದರೆ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿದರು. ರೇಷ್ಮೆ ವಿಸ್ತರಣಾಧಿಕಾರಿ ಎಸ್‌.ಇ. ಮಂಗಪ್ಪ, ರೇಷ್ಮೆ ನಿರೀಕ್ಷಕ ಸಿ. ವೆಂಕಟೇಶ್, ಪ್ರಗತಿಪರ ರೈತರಾದ ಮೋಹನ್‌, ಈ. ಕುಮಾರಸ್ವಾಮಿ, ಜ್ಞಾನೇಶ್, ಪರಮೇಶ್ ಪಾಲ್ಗೊಂಡಿದ್ದರು.

ಶೇ 75ರಷ್ಟು ಸಹಾಯ ಧನ

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸಿ.ಆರ್‌. ಕೃಷ್ಣ ಮಾತನಾಡಿ ‘ಹಿಪ್ಪು ನೇರಳೆ ಪೈರು ನಾಟಿ ಮಾಡುವ ರೈತರಿಗೆ ರೇಷ್ಮೆ ಇಲಾಖೆಯಿಂದ ಸಹಾಯ ಧನ ಸಿಗಲಿದೆ. ರೇಷ್ಮೆ ಹುಳು ಸಾಕಣೆ ಮನೆಗೆ ಶೇ 75ರಷ್ಟು ಸಹಾಯ ಧನ ನೀಡಲಾಗುತ್ತಿದೆ. ಸೋಂಕು ನಿವಾರಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಹನಿ ನೀರಾವರಿ ಅಳವಡಿಸಿಕೊಳ್ಳುವವರಿಗೆ ಸರ್ಕಾರ ಶೇ 90ರಷ್ಟು ಸಹಾಯ ಕೊಡುತ್ತಿದೆ. ಚಾಕಿ ಕೇಂದ್ರಗಳಿಂದ ರೇಷ್ಮೆ ಮರಿಗಳನ್ನು ಖರೀದಿಸುವವರಿಗೆ 100 ಮರಿಗೆ ₹1000 ನೆರವು ಸಿಗುತ್ತಿದೆ. ಭತ್ತ ಕಬ್ಬು ರಾಗಿಯಂತಹ ಸಾಂಪ್ರದಾಯಿಕ ಬೆಳೆಗಿಂತ ರೇಷ್ಮೆ ಕೃಷಿ ಲಾಭದಾಯಕವಾಗಿದ್ದು ರೈತರು ರೇಷ್ಮೆ ಬೆಳೆಯತ್ತ ಮುಖ ಮಾಡಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.