ಶ್ರೀರಂಗಪಟ್ಟಣ: ಸಮೀಪದ ಕರಿಘಟ್ಟ ಪ್ರಕೃತಿ ತಾಣದಲ್ಲಿದಸರಾ ಉತ್ಸವದ ನಿಮಿತ್ತ ಗುರುವಾರ ಯೋಗ ದಸರಾ ನಡೆಯಿತು.
ಕರಿಘಟ್ಟದಲ್ಲಿರುವ ಶ್ರೀನಿವಾಸ ದೇವಾಲಯದ ಮುಂದೆ ಒಂದೂವರೆ ತಾಸು ಯೋಗಪಟುಗಳು, ಅಧಿಕಾರಿಗಳು ಮತ್ತು ಸಂಘ, ಸಂಸ್ಥೆಗಳ ಸದಸ್ಯರು ಯೋಗ
ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ವಿ. ರೂಪಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಇತರರು ಯೋಗ ಮಾಡಿದರು. ವಿವಿಧ ಯೋಗ ಕೇಂದ್ರಗಳ 60ಕ್ಕೂ ಹೆಚ್ಚು ಯೋಗಪಟುಗಳು ಯೋಗಾಸನ ಪ್ರದರ್ಶಿಸಿದರು.
ಆಯುಷ್ ಇಲಾಖೆಯ ಡಾ. ಎಂ. ಶ್ರೀನಿವಾಸ್ ಯೋಗಪಟುಗಳಿಗೆ ಮಾರ್ಗದರ್ಶನ ಮಾಡಿದರು. ‘ದೇಹ, ಮನಸ್ಸು, ಆತ್ಮ ಶುದ್ಧಿಗೆ ಯೋಗ....’ ಎಂಬ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕೊರೊನಾಗೆ ಧಿಕ್ಕಾರ: ಯೋಗ ಪ್ರದರ್ಶನಕ್ಕೂ ಮುನ್ನ ಕರಿಘಟ್ಟದಲ್ಲಿ ಚಾರಣ ನಡೆಯಿತು. ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಚಾರಣಕ್ಕೆ ಚಾಲನೆ ನೀಡಿದರು.
ಚಾರಣಿಗರು ಹಾದಿಯ ಉದ್ದಕ್ಕೂ ‘ಕೊರೊನಾಗೆ ಧಿಕ್ಕಾರ’, ‘ಕೊರೊನಾ ತೊಲಗಲಿ’, ‘ಕೊರೊನಾ ಕೊಲ್ಲೋಣ’, ‘ನಮ್ಮ ನಡೆ ಕೊರೊನಾ ತೊಲಗಿಸುವ ಕಡೆ’.... ಇತ್ಯಾದಿ ಘೋಷಣೆಗಳನ್ನು ಕೂಗಿದರು.
‘ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ, ಹೃದಯದ ಸಮಸ್ಯೆ ಇರುವವರು 15 ದಿನಗಳಿಗೊಮ್ಮೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಸಕಾಲಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಲು ಸಾಧ್ಯವಾಗುತ್ತದೆ. ಕೋವಿಡ್ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು’ ಎಂದು ಡಾ. ಎಂ.ವಿ. ವೆಂಕಟೇಶ್ ಹೇಳಿದರು.
ಚಾರಣದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಬೆಟ್ಟದ ತುದಿಯವರೆಗೂ ಕೊರಕಲು ಹಾದಿಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ಯೋಗ ಶಿಕ್ಷಕ ಕೆ.ಶೆಟ್ಟಹಳ್ಳಿ ಅಪ್ಪಾಜಿ, ಡಾ. ಕೆ.ವೈ. ಶ್ರೀನಿವಾಸ್, ಡಾ.ರಮ್ಯಾ, ಡಾ.ನೌಷಾದ್, ವಕೀಲರ ಸಂಘದ ಕಾರ್ಯದರ್ಶಿ ಎಸ್.ಆರ್. ಸಿದ್ದೇಶ್, ಆಚೀವರ್ಸ್ ಅಕಾಡೆಮಿಯ ಮುಖ್ಯಸ್ಥ ಡಾ.ಆರ್. ರಾಘವೇಂದ್ರ, ಉಗಮ ಚೇತನ ಟ್ರಸ್ಟ್ ಅಧ್ಯಕ್ಷೆ ಪ್ರಿಯಾ ರಮೇಶ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.