ADVERTISEMENT

ಸಂಭ್ರಮದ ಶ್ರೀರಂಗನಾಥನ ರಥೋತ್ಸವ

ರಥ ಸಪ್ತಮಿ ಅಂಗವಾಗಿ ಕಾರ್ಯಕ್ರಮ, ರಥವನ್ನು ಎಳೆದ ಯುವಕರು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 10:05 IST
Last Updated 2 ಫೆಬ್ರುವರಿ 2020, 10:05 IST
ಶ್ರೀರಂಗಪಟ್ಟಣದಲ್ಲಿ ರಥಸಪ್ತಮಿ ಪ್ರಯುಕ್ತ ಶ್ರೀರಂಗನಾಥಸ್ವಾಮಿಯ ರಥೋತ್ಸವ ಶನಿವಾರ ನಡೆಯಿತು
ಶ್ರೀರಂಗಪಟ್ಟಣದಲ್ಲಿ ರಥಸಪ್ತಮಿ ಪ್ರಯುಕ್ತ ಶ್ರೀರಂಗನಾಥಸ್ವಾಮಿಯ ರಥೋತ್ಸವ ಶನಿವಾರ ನಡೆಯಿತು   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ರಥಸಪ್ತಮಿ ನಿಮಿತ್ತ ಶ್ರೀರಂಗನಾಥ ಸ್ವಾಮಿಯ ದಿವ್ಯ ರಥೋತ್ಸವ ಶನಿವಾರ ಸಡಗರ, ಸಂಭ್ರಮದಿಂದ ನಡೆಯಿತು.

ಮಧ್ಯಾಹ್ನ 2.50 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಂಪ್ರದಾಯದಂತೆ ಗರುಡ ಪಕ್ಷಿಯು ದೇವಾಲಯ ಮತ್ತು ರಥದ ಮೇಲೆ ಹಾರಾಡಿದ ಬಳಿಕ ಉತ್ಸವ ಆರಂಭವಾಯಿತು. ಸರ್ವಾಲಂಕೃತ ರಥವನ್ನು ಯುವಕರು ಉತ್ಸಾಹದಿಂದ ಎಳೆದರು. 10 ಅಡಿ ಉದ್ದದ ಕಬ್ಬಿಣದ ಸರಪಳಿಗಳನ್ನು ಹಿಡಿದು ಸ್ಪರ್ಧೆಗೆ ಬಿದ್ದವರಂತೆ ರಥವನ್ನು ಎಳೆದರು. ರಥ ಎಳೆಯುವಾಗ ‘ಗೋವಿಂದಾ...’, ‘ವೆಂಕಟರಮಣ...’, ‘ನಾರಾಯಣ...’ ಘೋಷಣೆಗಳು ಮೊಳಗಿದವು.

ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮಾ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದಲ್ಲಿ ಯುವ ಜೋಡಿಗಳು ಹೆಚ್ಚು ಕಂಡು ಬಂದರು. ರಥಕ್ಕೆ ಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ರಥ ಸಾಗಿದ ಮಾರ್ಗದಲ್ಲಿ ದೂಪ, ದೀಪದ ಸೇವೆಗಳು ನಡೆದವು. ದೇವಾಲಯದ ಸುತ್ತ ಒಂದು ಸುತ್ತು ಹಾಕಿದ ರಥ ಮಧ್ಯಾಹ್ನ 3.45ರ ಹೊತ್ತಿಗೆ ಸ್ವಸ್ಥಾನ ತಲುಪಿತು.

ADVERTISEMENT

ರಥೋತ್ಸವದ ನಿಮಿತ್ತ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ಅಭಿಷೇಕ, ಅರ್ಚನೆಗಳು ಜರುಗಿದರು. ಹರಕೆ ಹೊತ್ತವರು ಭಕ್ತರಿಗೆ ಅಲ್ಲಲ್ಲಿ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಮಜ್ಜಿಗೆ, ಪಾನಕ, ಹಣ್ಣು, ಕೋಸಂಬರಿ ವಿತರಿಸುತ್ತಿದ್ದ ದೃಶ್ಯ ಕಂಡುಬಂತು. ರಥೋತ್ಸವದಲ್ಲಿ ಸ್ಥಳೀಯರು ಮಾತ್ರವಲ್ಲದೆ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಕಡೆಗಳಿಂದಲೂ ಭಕ್ತರು ಆಗಮಿಸಿದ್ದರು.

ಸೂರ್ಯ ಮಂಡಲ ಉತ್ಸವ

ರಥ ಸಪ್ತಮಿ ಹಿನ್ನೆಲೆಯಲ್ಲಿ ಪಟ್ಟಣದ ರಾಜ ಬೀದಿಗಳಲ್ಲಿ ಮುಂಜಾನೆ ಸೂರ್ಯಮಂಡಲ ಮತ್ತು ಚಂದ್ರ ಮಂಡಲ ಉತ್ಸವಗಳು ನಡೆದವು.

ಮಂಗಳ ವಾದ್ಯಗಳ ಸಹಿತ ನಡೆದ ಉತ್ಸವಗಳಿಗೆ ದಾರಿಯುದ್ದಕ್ಕೂ ಜನರು ಪೂಜೆ ಸಲ್ಲಿಸಿದರು. ರಥಸಪ್ತಮಿಯ ರಥೋತ್ಸವಕ್ಕೆ ಹೆಚ್ಚು ಜನರು ಸೇರಿದ್ದರಿಂದ ದೇವಾಲಯದ ಮುಖ್ಯ ದ್ವಾರ ಇತರೆಡೆ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.