ADVERTISEMENT

ಡ್ರೋಣ್‌ನಿಂದ ಕೆಆರ್‌ಎಸ್‌ ಚಿತ್ರ ತೆಗೆದಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 12:14 IST
Last Updated 15 ಆಗಸ್ಟ್ 2020, 12:14 IST
   

ಮಂಡ್ಯ: ಕೆಆರ್‌ಎಸ್‌ ಜಲಾಶಯದ ನಿರ್ಬಂಧಿತ ಪ್ರದೇಶಕ್ಕೆ ತೆರಳಿ, ಡ್ರೋಣ್‌ ಮೂಲಕ ಛಾಯಾಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ ವಿದ್ಯಾರ್ಥಿಯನ್ನು ಕೆಆರ್‌ಎಸ್‌ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮೈಸೂರು ಜೆಎಸ್‌ಎಸ್‌ ಪಾಲಿಟೆಕ್ನಿಕ್‌, ಕಂಪ್ಯೂಟರ್‌ ಸೈನ್ಸ್‌ ವಿಭಾಗದ ವಿದ್ಯಾರ್ಥಿ ಸಂದೀಪ್‌ (21) ಬಂಧಿತ ಆರೋಪಿ. ಈತನಿಂದ ₹ 72 ಸಾವಿರ ಮೌಲ್ಯದ ಒಂದು ಡ್ರೋಣ್‌ ಕ್ಯಾಮೆರಾ, ಕಂಟ್ರೋಲರ್‌ ಹಾಗೂ ಮೊಬೈಲ್‌ ಫೋನ್‌ ವಶಕ್ಕೆ ಪಡೆಯಲಾಗಿದೆ.

ಜಲಾಶಯದಿಂದ ನೀರು ಹರಿಯುತ್ತಿರುವ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಕಾರಣ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆಆರ್‌ಎಸ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಮೈಸೂರಿನ ಬಲ್ಲಾಳ್‌ ಸರ್ಕಲ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರು ಮೂಲಕ ಈತ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಿದ್ದ. ಆ.10ರಂದು ಸಂಜೆ ಛಾಯಾಚಿತ್ರ ತೆಗೆದಿರುವಾಗಿ ತಪ್ಪೊಪ್ಪಿಕೊಂಡಿದ್ದಾರೆ.

ADVERTISEMENT

‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಈಗಿನದಲ್ಲ. 2016ರಲ್ಲಿ ಚಿತ್ರೀಕರಿಸಿದ ವಿಡಿಯೊ ಹರಿದಾಡುತ್ತಿದೆ. ಆದರೆ ಈಗ ಛಾಯಾಚಿತ್ರ ತೆಗೆದಿದ್ದು ಆರೋಪಿಯನ್ನು ಬಂಧಿಸಿ ನೀರಾವರಿ ಕಾಯ್ದೆ, ಏರ್‌ಕ್ರಾಫ್ಟ್‌ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.