ADVERTISEMENT

14 ದಿನದೊಳಗೆ ಹಣ ಪಾವತಿಸಿ

ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಹಣ ಪಾವತಿ ವಿಳಂಬ: ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:48 IST
Last Updated 14 ಅಕ್ಟೋಬರ್ 2025, 4:48 IST
ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಹಣ ಪಾವತಿ ಮಾಡುವ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು
ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಹಣ ಪಾವತಿ ಮಾಡುವ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು   

ಮಂಡ್ಯ: ‘ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ನ್ಯಾಯಯುತವಾಗಿ ನೀಡಬೇಕಾದ ಹಣವನ್ನು ಪಾವತಿ ಮಾಡಬೇಕು ಮತ್ತು ಈಗಾಗಲೇ ಬಾಕಿಯಿರುವ ಹಣವನ್ನು ಶೀಘ್ರದಲ್ಲೇ ಕೊಡಿ’ ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿ ಹಣವನ್ನು ನೀಡುತ್ತಿರುವ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ ಮತ್ತು ರೈತರಿಗೆ ಪಾವತಿ ಹಣ ಸಲ್ಲಿಸದ ಕಾರ್ಖಾನೆಗಳಿಗೆ ನೋಟಿಸ್ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು.

ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಪಾವತಿ ಹಣವನ್ನು ನೀಡುತ್ತಿಲ್ಲ ಎಂದು ರೈತರಿಂದ ದೂರು ಬರುತ್ತಿದ್ದು, ರೈತರಿಗೆ ಅಧಿಕೃತವಾಗಿ ನೀಡಬೇಕಾದ ಪಾವತಿಯನ್ನು 14 ದಿನದೊಳಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕು ಮತ್ತು ಹಣ ಪಾವತಿ ಕುರಿತು ವರದಿಯನ್ನು ಒದಗಿಸಬೇಕು ಎಂದು ತಿಳಿಸಿದರು.

ADVERTISEMENT

ರೈತರು ಕಬ್ಬು ನೀಡಿದ 14 ದಿನದೊಳಗೆ ಕಡ್ಡಾಯವಾಗಿ ಸಕ್ಕರೆ ಕಾರ್ಖಾನೆಗಳು ಪಾವತಿಯನ್ನು ನೀಡಬೇಕು. 14 ದಿನದೊಳಗೆ ನಂತರ ಪಾವತಿ ನೀಡಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ರೈತರನ್ನು ಪಾವತಿ ವಿಷಯವಾಗಿ ಅಲೆದಾಡಿಸಬಾರದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಸಹಾಯಕ ನಿರ್ದೇಶಕ ಶ್ರೀನಿವಾಸ್, ವ್ಯವಸ್ಥಾಪಕಿ ರೇಣುಕಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ರೈತ ಮುಖಂಡರು ಇದ್ದರು. 

ಕಬ್ಬು ನುರಿಸುವ ವೇಗ ಹೆಚ್ಚಿಸಿ

‘ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ (ಮೈಷುಗರ್‌) ಕಬ್ಬು ನುರಿಸುವ ವೇಗವನ್ನು ಹೆಚ್ಚಿಸಬೇಕು ಮತ್ತು ರೈತರಿಗೆ ನೀಡಬೇಕಾದ ಬಾಕಿಯನ್ನು ಕೂಡಲೇ ಪಾವತಿಸಬೇಕು’ ಎಂದು ರೈತ ಕಾರ್ಮಿಕರ ನಿಯೋಗವು ಒತ್ತಾಯಿಸಿತು.  ಮೈಷುಗರ್‌ ಕಾರ್ಖಾನೆಯ ಜನರಲ್‌ ಮ್ಯಾನೇಜರ್‌ ಅವರನ್ನು ಸೋಮವಾರ ಭೇಟಿ ಮಾಡಿದ ನಿಯೋಗ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿತು. ಮೈಷುಗರ್‌ನಲ್ಲಿ ಶೇ 6.74 ಇಳುವರಿ ಬರುತ್ತಿರುವ ಕಾರಣ ರೈತರಿಗೆ ತೀವ್ರ ನಷ್ಟವಾಗುತ್ತಿದೆ. 1.17 ಲಕ್ಷ ಟನ್‌ ಮಾತ್ರ ಕಬ್ಬು ನುರಿಸಿದ್ದು ಒಪ್ಪಂದದ ಕಬ್ಬು ಎಲ್ಲಿಗೆ ಹೋಯಿತು? ಇತರ ಕಾರ್ಖಾನೆಗಳಿಗೆ ಮತ್ತು ಆಲೆಮನೆಗಳಿಗೆ ಕಬ್ಬು ಹೋಗಲು ಯಾರು ಕಾರಣ? ಎಂದು ನಿಯೋಗ ಪ್ರಶ್ನಿಸಿತು.  ಬಾಯ್ಲರ್‌ ಸಮಸ್ಯೆ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಒಪ್ಪಂದದ ಪ್ರಕಾರ ಗುತ್ತಿಗೆದಾರರಾದ ಆರ್‌.ಬಿ.ಟೆಕ್‌ ಕಂಪನಿ ಸಮರ್ಪಕವಾಗಿ ಕಬ್ಬು ನುರಿಸುತ್ತಿಲ್ಲ. ಕಾರ್ಖಾನೆಯನ್ನು ಲಾಭದ ಹಾದಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.  ನಿಯೋಗದಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಚಂದ್ರಶೇಖರ ಇಂಡುವಾಳು ಚಂದ್ರು ಶಿವಳ್ಳಿ ಬೋರಲಿಂಗೇಗೌಡ ಜವರೇಗೌಡ ಶಿವರಾಮ್‌ ಹಲ್ಲೇಗೆರೆ ಮಂಜು ಸುರೇಶ್‌ ಮುಂತಾದವರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.