ADVERTISEMENT

ಟ್ರಾಮಾ ಸೆಂಟರ್‌: ಪ್ರಸ್ತಾವ ಸಲ್ಲಿಸಿ

ಪಿ.ಎಂ.ಎಸ್‌.ಎಸ್‌.ವೈ ಅಡಿಯಲ್ಲಿ ಸೂಪರ್‌ ಸ್ಪೆಷ್ಟಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಎಚ್‌ಡಿಕೆ ಪತ್ರ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 3:22 IST
Last Updated 10 ಡಿಸೆಂಬರ್ 2025, 3:22 IST
ಮಂಡ್ಯದ ಮಿಮ್ಸ್‌ ಆಸ್ಪತ್ರೆಯ ಹೊರನೋಟ 
ಮಂಡ್ಯದ ಮಿಮ್ಸ್‌ ಆಸ್ಪತ್ರೆಯ ಹೊರನೋಟ    

ಮಂಡ್ಯ: ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿ.ಎಂ.ಎಸ್‌.ಎಸ್‌.ವೈ) ಅಡಿಯಲ್ಲಿ ಮಂಡ್ಯ ನಗರದಲ್ಲಿ ಸುಸಜ್ಜಿತ, ಅತ್ಯಾಧುನಿಕ ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೆ ಸೂಕ್ತ ಪ್ರಸ್ತಾವವನ್ನು ತುರ್ತಾಗಿ ಕಳಿಸಿಕೊಡುವಂತೆ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

2025 ಜುಲೈ 11ರಂದೇ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವರು; ಮಂಡ್ಯದಲ್ಲಿ ತುರ್ತು ಚಿಕಿತ್ಸಾ ಘಟಕ (ಟ್ರಾಮಾ ಸೆಂಟರ್) ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ತುರ್ತು ಅಗತ್ಯವಿದೆ. ಇದಕ್ಕಾಗಿ ಕ್ರೋಡೀಕೃತ ಯೋಜನೆಯೊಂದಿಗೆ ಸೂಕ್ತ ಪ್ರಸ್ತಾವವನ್ನು ಕೂಡಲೇ ಕಳಿಸುವಂತೆ ಕೋರಿದ್ದಾರೆ.

ಸಚಿವ ಕುಮಾರಸ್ವಾಮಿ ಅವರು ಈಗಾಗಲೇ ತಾವು ಪ್ರತಿನಿಧಿಸುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜನರ ಅನುಕೂಲಕ್ಕಾಗಿ ಟ್ರಾಮಾ ಕೇಂದ್ರ ಹಾಗೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣದ ಅಗತ್ಯವನ್ನು ಮನಗಂಡಿದ್ದು, ಈ ಮೊದಲೇ ಜಿಲ್ಲೆಯ ಉನ್ನತ ಅಧಿಕಾರಿಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇದೀಗ ಪ್ರಸ್ತಾವ ಕಳಿಸುವ ಜತೆಗೆ ಸಮಗ್ರ ಯೋಜನಾ ವರದಿಯನ್ನು (ಡಿ.ಪಿ.ಆರ್) ಸಿದ್ಧಪಡಿಸುವಂತೆ ಹೇಳಿದ್ದಾರೆ.

ADVERTISEMENT

ಸದ್ಯದ ಸ್ಥಿತಿಯಲ್ಲಿ ಪ್ರತೀ ದಿನ ಮಿಮ್ಸ್‌ ಆಸ್ಪತ್ರೆಯಲ್ಲಿ 2000ರಿಂದ 2500 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ರೋಗಿಗಳಿಂದ ಆಸ್ಪತ್ರೆ, ವೈದ್ಯರ ಮೇಲೆ ಒತ್ತಡ ಹೆಚ್ಚಾಗಿದೆ. ಜತೆಗೆ, ಈ ದಿನಗಳಲ್ಲಿ ಉದ್ಭವವಾಗುತ್ತಿರುವ ಕಠಿಣ ಆರೋಗ್ಯ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ನೀಡವುದಕ್ಕೆ ಅಗತ್ಯವಿರುವ ವೈದ್ಯಕೀಯ ಪರಿಕರಗಳು, ಕಟ್ಟಡದ ಸೌಲಭ್ಯ, ಶಸ್ತ್ರಚಿಕಿತ್ಸಾ ಸೌಲಭ್ಯಗಳು ಲಭ್ಯವಿಲ್ಲ ಎಂದು ಜನರಿಂದ ನನಗೆ ದೂರುಗಳು ಬಂದಿವೆ.

‘ತಮಿಳು ಕಾಲೊನಿ ವಿವಾದ’ ಬಗೆಹರಿದು ಜಾಗ ಸಿಕ್ಕಿದರೆ ಪಿ.ಎಂ.ಎಸ್ಎಸ್‌.ವೈ. ಯೋಜನೆ ಅಡಿ ಕೇಂದ್ರದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರಬಹುದು ಎಂದು ಮಿಮ್ಸ್ ನಿರ್ದೇಶಕ ಡಾ.ಪಿ. ನರಸಿಂಹಸ್ವಾಮಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಕೂಡಲೇ ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲಿ ಎಂದು ಸಚಿವರು ತಿಳಿಸಿದ್ದಾರೆ. 

ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ 

ಮಿಮ್ಸ್‌ ಆವರಣದಲ್ಲೇ ಜಾಗ ನೀಡಿ’

ಮಂಡ್ಯ ವೈದ್ಯಕೀಯ ವಿಜ್ಙಾನ ಸಂಸ್ಥೆ (ಮಿಮ್ಸ್) ಆವರಣದಲ್ಲಿಯೇ ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವುದು ಜಿಲ್ಲೆಯ ಜನರ ಬಯಕೆಯಾಗಿದೆ. ಅಲ್ಲೇ ನಿರ್ಮಿಸುವುದು ಸೂಕ್ತ ನಿರ್ಧಾರವಾಗಲಿದೆ. ಹೀಗಾಗಿ ಮಿಮ್ಸ್ ಆವರಣದಲ್ಲಿಯೇ ಸರ್ಕಾರ ಸೂಕ್ತ ಜಾಗ ನೀಡಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಹೃದಯಾಘಾತ ರಸ್ತೆ ಅಪಘಾತ ಸೇರಿ ಯಾವುದೇ ತುರ್ತು ಆರೋಗ್ಯ ಸಮಸ್ಯೆಗೆ ಇಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು. ಯೋಜನೆಗೆ ಆಗುವ ಅಷ್ಟೂ ವೆಚ್ಚದ ಅನುದಾನವನ್ನು ಕೇಂದ್ರದಿಂದಲೇ ತರುವ ಪ್ರಯತ್ನ ಮಾಡಲಾಗುವುದು. ರಾಜ್ಯ ಸರ್ಕಾರ ಸೂಕ್ತ ಜಾಗ ನೀಡಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.