ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್ಎಸ್ ಅಣೆಕಟ್ಟೆಯೊಳಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಮೂವರ ಪೈಕಿ ಇಬ್ಬರನ್ನು ಕೆಆರ್ಎಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆಯ ಮೂರ್ತಿ ಮತ್ತು ಜೀವನ್ ಬಂಧಿತರು. ಇವರ ಜತೆಗಿದ್ದ ದರ್ಶನ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ.
ಒಂದು ತಿಂಗಳ ಹಿಂದೆ ಅಣೆಕಟ್ಟೆಯ ದಕ್ಷಿಣ ದ್ವಾರದ ಸಮೀಪ ಒಳಕ್ಕೆ ಇಳಿದು ರೀಲ್ಸ್ ಮಾಡಿದ್ದರು. ಅಣೆಕಟ್ಟೆಯೊಳಗೆ, ಆರ್ಬಿಎಲ್ಎಲ್ ನಾಲೆ (ಬಲದಂಡೆ ನಾಲೆ)ಯ ದುರಸ್ತಿ ಕಾರ್ಯ ನಡೆಯುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಜತೆ ಮೂವರು ತೆರಳಿ ಜಲಾಶಯದಲ್ಲಿ ನೀರು ಖಾಲಿಯಾಗುತ್ತಿರುವುದನ್ನು ವಿಡಿಯೊ ಮಾಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೊ ಆಧರಿಸಿ, ಅಣೆಕಟ್ಟೆಯೊಳಕ್ಕೆ ಅಕ್ರಮ ಪ್ರವೇಶ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಫಾರೂಕ್ ಅಬು ಕೆಆರ್ಎಸ್ ಠಾಣೆಗೆ ಮೂರು ದಿನಗಳ ಹಿಂದೆ ದೂರು ನೀಡಿದ್ದರು.
ಅಣೆಕಟ್ಟೆಯೊಳಗೆ ಇಳಿದು ವಿಡಿಯೊ ಮಾಡಿದ್ದ ಮೂವರ ಪೈಕಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೆಆರ್ಎಸ್ ಠಾಣೆ ಪಿಎಸ್ಐ ರಮೇಶ್ ಕರ್ಕಿಕಟ್ಟಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.