ADVERTISEMENT

ಮಂಡ್ಯ: ವಾರಾಂತ್ಯದ ಕರ್ಫ್ಯೂ; ನಿಯಮ ಮೀರಿ ಅನಗತ್ಯ ಓಡಾಟ, ವರ್ಷದ ತೊಡಕು ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 16:18 IST
Last Updated 16 ಜನವರಿ 2022, 16:18 IST
ಮಳವಳ್ಳಿ ಪಟ್ಟಣದಲ್ಲಿ ವಾರಾಂತ್ಯದ ಕರ್ಫ್ಯೂ ಲೆಕ್ಕಿಸದೆ ಜನ ಓಡಾಡಿದರು
ಮಳವಳ್ಳಿ ಪಟ್ಟಣದಲ್ಲಿ ವಾರಾಂತ್ಯದ ಕರ್ಫ್ಯೂ ಲೆಕ್ಕಿಸದೆ ಜನ ಓಡಾಡಿದರು   

ಮಂಡ್ಯ: ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ‘ವರ್ಷದ ತೊಡಕು’ ಆಚರಿಸುವ ಕಾರಣ ವಾರಾಂತ್ಯ ಕರ್ಫ್ಯೂ ನಿಯಮಗಳನ್ನು ಜಿಲ್ಲೆಯ ವಿವಿಧೆಡೆ ಸಾರ್ವಜನಿಕರು ಪಾಲಿಸಲಿಲ್ಲ. ಮಾಂಸ ಖರೀದಿ ನೆಪದಲ್ಲಿ ಅನಗತ್ಯವಾಗಿ ಓಡಾಡಿದರು.

ಪೊಲೀಸರು ತಪಾಸಣೆ ನಡೆಸಿದಾಗ ವಿವಿಧ ಕಾರಣ ಹೇಳಿ ತಪ್ಪಿಸಿಕೊಂಡು ಪ್ರಮುಖ ಬೀದಿಗಳಲ್ಲಿ ತಿರುಗಾಡಿದರು. ಕೆಲವು ಕಡೆ ಪೊಲೀಸರು ದಂಡ ವಿಧಿಸಿದರು.

ಬ್ಯಾರಿಕೇಡ್‌ಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಇರಿಸಿಕೊಂಡು ಪೊಲೀಸರು ಕಾವಲು ಕಾಯುತ್ತಿದ್ದರು. ವಿನಾಕಾರಣ ಮನೆಯಿಂದ ಬಂದವರಿಗೆ, ಮಾಸ್ಕ್‌ ಹಾಕದೆ ತಿರುಗಾಡುತ್ತಿದ್ದವರಿಗೂ ಬುದ್ಧಿ ಹೇಳಿ ಕಳುಹಿಸಿದರು.

ADVERTISEMENT

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಿಕೋ ಎನ್ನತ್ತಿದ್ದು, 25 ರಿಂದ 30 ಜನ ಬಂದರೆ ಮಾತ್ರ ಆಯಾ ಮಾರ್ಗಗಳಲ್ಲಿ ಬಸ್‌ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿತ್ತು. ತುರ್ತಾಗಿ ಹೋಗಬೇಕಾದವರು ಇದರಿಂದಾಗಿ ಗಂಟೆಗಟ್ಟಲೆ ಕಾಯಬೇಕಾಯಿತು.

‘ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ನೂರಾರು ಸಂಖ್ಯೆಯಲ್ಲಿ ಹೆಚ್ಚುತ್ತಿವೆ. ಆದರೂ ಜನ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಂಥ ಧೋರಣೆ ಬೇಡ ಎಂದು ಸ್ಥಳೀಯ ಮುಖಂಡರಾದ ಶ್ರೇಯಸ್‌, ಪ್ರದೀಪ್‌, ಮನು, ಬಸವಣ್ಣ, ಮಧು ಒತ್ತಾಯಿಸಿದರು.

ನಗರದ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸಂಚರಿಸುತ್ತಿದ್ದ ವಾಹನಗಳು ಕಂಡು ಬಂದವು.

ಅಗತ್ಯ ವಸ್ತುಗಳಾದ ಹಾಲು, ತರಕಾರಿ, ದಿನಸಿ ಪದಾರ್ಥಗಳು, ಔಷಧಿ ಅಂಗಡಿಗಳು ಎಂದಿನಂತೆ ತರೆದಿದ್ದವು. ಮಾಂಸದ ಅಂಗಡಿಗಳ ಬಳಿ ಜನರ ಗುಂಪು ಕಂಡು ಬಂದಿತು. ವಾರಾಂತ್ಯ ಕರ್ಫ್ಯೂವಿಗೆ ಹಿಂದಿನ ವಾರದಷ್ಟು ಈ ಬಾರಿ ಜನ ಸ್ಪಂದಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.