ADVERTISEMENT

ನಿರಾಣಿ ಶುಗರ್ಸ್‌ ಕರಾರು ಉಲ್ಲಂಘನೆ: ಎಸಿಬಿಗೆ ದೂರು

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 12:57 IST
Last Updated 3 ಜುಲೈ 2021, 12:57 IST

ಮಂಡ್ಯ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ)ಯನ್ನು 40 ವರ್ಷಗಳವರೆಗೆ ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್‌ ಆಡಳಿತ ಮಂಡಳಿ ಕರಾರು ಉಲ್ಲಂಘಿಸಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಎನ್‌.ರವೀಂದ್ರ ಶನಿವಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದಾರೆ.

ನಿರಾಣಿ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕ ವಿಜಯ ಎಂ ನಿರಾಣಿ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ಅವರ ಪುತ್ರರಾಗಿದ್ದು ತಂದೆಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಪಿಎಸ್‌ಎಸ್‌ಗೆ ಗುತ್ತಿಗೆ ಕರಾರಿನ 11 ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಗುತ್ತಿಗೆ ಕರಾರು ವೇಳೆ ಆಡಳಿತ ಮಂಡಳಿಯು ಕಾರ್ಖಾನೆಗೆ ಮುಂಗಡವಾಗಿ ₹ 20 ಕೋಟಿ ಹಣ ಪವಾತಿಸಬೇಕಾಗಿತ್ತು, ಭದ್ರತಾ ಠೇವಣಿಯಾಗಿ ₹ 5 ಕೋಟಿ ಇಡಬೇಕಾಗಿತ್ತು. ಈ ಹಣದಿಂದ 2017ರಿಂದ ನೌಕರರ ಬಾಕಿ ವೇತನ, ಭವಿಷ್ಯ ನಿಧಿ ಪಾವತಿ ಹಾಗೂ ಕಾರ್ಖಾನೆಯ ಸಾಲ ತೀರಿಸಬೇಕಾಗಿತ್ತು. ಗುತ್ತಿಗೆ ಪಡೆದು ವರ್ಷ ಕಳೆದರೂ ಮುಂಗಡ ಹಣ, ಠೇವಣಿ ಹಣ ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ.

ADVERTISEMENT

ಗುತ್ತಿಗೆ ಒಪ್ಪಂದ ಪೂರ್ಣಗೊಂಡ ನಂತರ 90 ದಿನಗಳ ಒಳಗಾಗಿ ಒಪ್ಪಂದವನ್ನು ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಬೇಕಾಗಿತ್ತು. ಆದರೆ ಗುತ್ತಿಗೆ ಕರಾರು ಈಗಲೂ ನೋಂದಣಿಯಾಗಿಲ್ಲ. ಕಾರ್ಖಾನೆಯನ್ನು ಉನ್ನತದರ್ಜೆಗೇರಿಸಲು ₹ 24 ಕೋಟಿ ಹಣ ಮೀಸಲಿಡುವ ಷರತ್ತನ್ನೂ ನಿರಾಣಿ ಷುಗರ್ಸ್‌ ಉಲ್ಲಂಘಿಸಿದೆ. ಮೊದಲು ಇದ್ದ ಕಾರ್ಮಿಕರನ್ನು ಮುಂದುವರಿಸಬೇಕಾಗಿತ್ತು, ಆದರೆ 54 ಕಾರ್ಮಿಕರನ್ನು ವಜಾಗೊಳಿಸಿ ಒಪ್ಪಂದ ಮುರಿಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.