ಮಂಡ್ಯ: ‘ಎಲ್ಲಾ ರೀತಿಯ ತ್ಯಾಜ್ಯಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಮರುಬಳಕೆ ಮಾಡಿಕೊಂಡು ಭೂಮಿಗೆ ಆಗುತ್ತಿರುವ ಅಪಾಯವನ್ನು ತಡೆಗಟ್ಟಬೇಕು’ ಎಂದು ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ರವೀಂದ್ರ ಹೇಳಿದರು.
ಪಿಇಎಸ್ ಎಂಜಿನಿಯರಿಂಗ್ ಕಾಲೇಜು, ಜಿಲ್ಲಾ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ, ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ನಡೆದ ‘ತ್ಯಾಜ್ಯದಿಂದ ಸ್ವಾವಲಂಬನದೆಡೆಗೆ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ತ್ಯಾಜ್ಯವೆಂದು ಎಸೆಯುವ ಪದಾರ್ಥಗಳಿಂದ ಪರಿಸರಕ್ಕೆ ಪೂರಕವಾದ ಪದಾರ್ಥಗಳನ್ನು ತಯಾರಿಸಿ ಪರಿಸರ ಸಮತೋಲನವಾಗಿ ಇರುವಂತೆ ಕಾಪಾಡಿಕೊಳ್ಳಬೇಕು. ಜೈವಿಕ ಇಂಧನ ಉಪ ಉತ್ಪನ್ನಗಳಾದ ಸೋಪು, ಪಾತ್ರೆ ತೊಳೆಯುವ ಸೋಪು, ಬಟ್ಟೆ ತೊಳೆಯುವ ಲಿಕ್ವಿಡ್, ಗಾಜು ಕ್ಲೀನರ್ ಲಿಕ್ವಿಡ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುವ ಮೂಲಕ ಸ್ವಾವಲಂಬನೆಯ ಜೀವನೋಪಾಯವನ್ನು ಕಂಡುಕೊಳ್ಳಬಹುದು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಪಿಇಎಸ್ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಮಾತನಾಡಿ ‘ಹಸಿಕಸದಿಂದ ಜೈವಿಕ ಅನಿಲ ತಯಾರಿಸಿ, ಮನೆ ಬಳಕೆಗೆ ಉಪಯೋಗಿಸಬಹುದು. ಇದರೊಂದಿಗೆ ಹಣ ಸಂಪಾದಿಸುವ ಉಪ ಉದ್ಯೋಗವಾಗಿಯೂ ರೂಪಿಸಿಕೊಳ್ಳಬಹುದು. ಇದು ಪರಿಸರ ಸಂರಕ್ಷಣೆಗೆ ಪೂರಕವಾಗಿದ್ದು, ಇದನ್ನು ಕಲಿತು, ಪ್ರಚಾರ ಮಾಡಿ ದೊಡ್ಡ ಮಟ್ಟದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಪ್ರಾತ್ಯಕ್ಷಿಕೆ ಕೇಂದ್ರದ ಸಂಯೋಜಕ ಡಾ.ಎಲ್.ಪ್ರಸನ್ನಕುಮಾರ್, ಹಸಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ, ತೆಂಗಿನ ಗರಿಯಿಂದ ಸ್ಟ್ರಾ ತಯಾರಿಕೆ ಕುರಿತು ಉಪನ್ಯಾಸ ನೀಡಿ, ಪ್ರಾತ್ಯಕ್ಷಿಕೆ ನೀಡಿದರು.
ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್ಚಂದ್ರಗುರು, ಪ್ರಾಧ್ಯಾಪಕರಾದ ಬಿ.ಎಸ್.ಶಿವಕುಮಾರ್, ದಿನೇಶ್ ಪ್ರಭು, ವಿಕಸನ ಅಧಿಕಾರಿ ರಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.