ಮಂಡ್ಯ: ‘ಪಂಚ ಗ್ಯಾರಂಟಿ ಯೋಜನೆಗಳಿಗೆ ಕಳೆದ ವರ್ಷ ₹53 ಸಾವಿರ ಕೋಟಿ ವೆಚ್ಚ ಮಾಡಿದ್ದೆವು. ಈ ಬಾರಿ ಬಜೆಟ್ನಲ್ಲಿ ₹50 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಆಸ್ತಿ ಸೃಜನೆಗೆ ₹83 ಸಾವಿರ ಕೋಟಿ ಇಟ್ಟಿದ್ದೇವೆ. ಬಿಜೆಪಿಯವರು ಆರೋಪಿಸುವಂತೆ ನಮ್ಮದು ‘ಪಾಪರ್ ಸರ್ಕಾರ’ವಾಗಿದ್ದರೆ, ಇಷ್ಟು ಅಭಿವೃದ್ಧಿ ಸಾಧ್ಯವಿತ್ತೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದರು.
ನಗರದಲ್ಲಿ ಜಿಲ್ಲಾ ಕುರುಬರ ಸಂಘ ಗುರುವಾರ ಆಯೋಜಿಸಿದ್ದ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡದ ಶಂಕುಸ್ಥಾಪನೆ ವೇಳೆ ಮಾತನಾಡಿ, ‘ಬಿಜೆಪಿ ನಿರಂತರ ಸುಳ್ಳು ಹೇಳಿಕೊಂಡು ತಿರುಗುತ್ತಿದೆ. ಸರ್ಕಾರದ ಬೊಕ್ಕಸ ಖಾಲಿ ಎನ್ನುತ್ತಿದ್ದಾರೆ. ಆದರೆ ಜನರಿಗೆ ಕಾಣುತ್ತಿರುವ ಅಭಿವೃದ್ಧಿಪರ ಕಾರ್ಯಕ್ರಮಗಳು ಬಿಜೆಪಿಯವರಿಗೇಕೆ ಕಾಣುತ್ತಿಲ್ಲ. ಅವರು ಯಾವತ್ತಿಗೂ ಸಾಮಾಜಿಕ ನ್ಯಾಯದ ಪರವಾಗಿಲ್ಲ’ ಎಂದು ಕುಟುಕಿದರು.
ನನ್ನ ಹೆಂಡ್ತಿಗೂ ಫ್ರೀ: ‘ಜಾತಿ ನೋಡಿ ಗ್ಯಾರಂಟಿ ಸೌಲಭ್ಯಗಳನ್ನು ಕೊಡುತ್ತಿಲ್ಲ. ಸಚಿವ ಚಲುವರಾಯಸ್ವಾಮಿ, ಶಾಸಕ ನರೇಂದ್ರಸ್ವಾಮಿ ಹಾಗೂ ನನ್ನ ಹೆಂಡತಿಯೂ ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್ನಲ್ಲಿ ಹೋಗಬಹುದು’ ಎಂದು ಸಿಎಂ ಹೇಳಿದಾಗ, ಸಭಿಕರು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.
ಅಣೆಕಟ್ಟುಗಳಿಗೆ ಭದ್ರತೆಗೆ ಸೂಚನೆ
ಅಣೆಕಟ್ಟುಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲೆಡೆ ಎಚ್ಚರಿಕೆ ನೀಡಲಾಗಿದ್ದು ಹೆಚ್ಚಿನ ಭದ್ರತೆ ಒದಗಿಸಲು ಸೂಚಿಸಿದ್ದೇನೆ. ಯಾವ ಘಳಿಗೆಯಲ್ಲಿ ಏನಾದರೂ ಆಗಬಹುದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.