ADVERTISEMENT

ಸಮ ಸಮಾಜ: ಸಮಾನ ಅವಕಾಶ ಅಗತ್ಯ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ; ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 4:22 IST
Last Updated 9 ಮಾರ್ಚ್ 2021, 4:22 IST
ಕಲ್ಲಹಳ್ಳಿಯಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಉದ್ಘಾಟಿಸಿದರು
ಕಲ್ಲಹಳ್ಳಿಯಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಉದ್ಘಾಟಿಸಿದರು   

ಮಂಡ್ಯ: ‘ ಸಬಲೀಕರಣ ಎಂದರೆ ಕೈಯಲ್ಲಿ ಕಾಸು ಇರಬೇಕು, ಅಧಿಕಾರ ಇರಬೇಕು ಎಂಬುದಲ್ಲ. ಅವಕಾಶಗಳೂ ಇರಬೇಕು. ಅವಕಾಶಗಳು ಲಿಂಗ ಸಮಾನತೆಗೆ ಪೂರಕವಾಗಿರಬೇಕು. ಸಮ ಸಮಾಜ ನಿರ್ಮಾಣಕ್ಕೆ ಸಮಾನ ಅವಕಾಶ, ಲಿಂಗ ಸಮಾನತೆ ಇರಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ ಹೇಳಿದರು.

ಲಕ್ಷ್ಮೀದೇವಿ, ಮಹಾಲಕ್ಷ್ಮಿ, ಓಂ ಶಕ್ತಿ, ಸ್ತ್ರೀ ಶಕ್ತಿ ಮಹಿಳಾ ಸ್ವ ಸಹಾಯ ಸಂಘದ ವತಿಯಿಂದ ನಗರದ ಕಲ್ಲಹಳ್ಳಿಯಲ್ಲಿ ಸೋಮವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹೆಣ್ಣು ಎಂದರೆ ಅಡುಗೆ ಮಾಡಬೇಕು, ಮಕ್ಕಳು ಹೆರಬೇಕು, ಬೇರೆಯವರು ಹೇಳಿದ ಕೆಲಸವನ್ನು ಮಾಡಬೇಕು ಎಂಬುದು ಹಿಂದಿನ ಕಟ್ಟುಪಾಡು, ಮನುವಾದ ಆಗಿತ್ತು. ಈಗ ಕಾಲ ಬದಲಾಗಿದ್ದು, ಜಾಗತೀಕರ ಣದಿಂದ ಉಜ್ವಲ, ವಿಪುಲ ಅವಕಾಶ ಗಳು ಇದ್ದು ಸದುಪಯೋಗ ಪಡಿಸಿಕೊಳ್ಳ ಬೇಕು. ಅವಕಾಶ ಬಳಸಿಕೊಳ್ಳಲು ಸಮಾನತೆ ಬೇಕಾಗಿದ್ದು, ಇದಕ್ಕಾಗಿ ಸರ್ಕಾರ ಮೀಸಲಾತಿ ತಂದಿದೆ. ಗ್ರಾ.ಪಂ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಲ್ಲಿ ಶೇ 50ಕ್ಕೂ ಹೆಚ್ಚು ಮಹಿಳೆಯ ರಿದ್ದರೂ ಅಧಿಕಾರ ನಡೆಸುವುದು ಮಾತ್ರ ಕಡಿಮೆ’ ಎಂದು ಹೇಳಿದರು.

ADVERTISEMENT

‘ಸಂಪ್ರದಾಯ, ಸಂಕೋಲೆಗಳ ನಮಗೆ ನಾವೇ ಹೇರಿಕೊಂಡಿದ್ದೇವೆ. ತಾಯಿ, ಮಗಳು, ತಂಗಿಯಾಗಿ ಸವಾಲು ಸ್ವೀಕರಿಸಿ ನಮ್ಮತನ, ನಮ್ಮ ಸಮಯ, ನಮ್ಮ ಬೆಳವಣಿಗೆ ಆಗಬೇಕಿದೆ. ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಅಳವಡಿಸಿಕೊಳ್ಳಬೇಕು’ ಎಂದರು.

ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್‌.ಶಿವಲಿಂಗು, ನಗರಸಭೆ ಸದಸ್ಯ ಟಿ.ರವಿ, ಮಂಡ್ಯ ಜಿಲ್ಲಾ ಮೇದ ಜನಾಂಗದ ಅಧ್ಯಕ್ಷ ಶಿವರಾಮಿ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಇದ್ದರು.

ವಿವಿಧೆಡೆ ಮಹಿಳಾ ದಿನಾಚರಣೆ: ನಗರದ ಸಂತ ಜೋಸೆಫ್ಸ್‌ ಶಿಕ್ಷಕಿಯರ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ರೂಪಕಗಳನ್ನು ಪ್ರದರ್ಶಿಸಿದರು.

ಪಿಇಎಸ್ ಕಾಲೇಜಿನ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪೂಜಾನಾಗ್‍ಪಾಲ್, ಸಂತ ಜೋಸೆಫ್‌ ಆಡಳಿತಾಧಿಕಾರಿ ಸಿಸ್ಟರ್ ವೀಣಾಸ್ಟೆಲ, ಸಿಸ್ಟರ್ ಜಾಯ್, ಸಿಸ್ಟರ್ ಬೆನಿಗ್ನಾ, ಪ್ರಾಂಶುಪಾಲ ಡಾ.ಜಯಶಂಕರ್ ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾಶ್ರೀಕಾಂತ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ದ್ಯಾವಪ್ಪ, ನಿಂಗೇಗೌಡ, ಸಿದ್ದರಾಮೇಗೌಡ ಮತ್ತು ಮಹಿಳಾ ಪದಾಧಿಕಾರಿಗಳು ಇದ್ದರು.

ಎಂಓಬಿ ಗ್ರಾಮೀಣ ಆರೋಗ್ಯ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿಲುಮೆ ಮಹಿಳಾ ಮಹಾ ಒಕ್ಕೂಟದ ಸಹಯೋಗದಲ್ಲಿ ನಗರದ ಯತ್ತಗದಹಳ್ಳಿಯ ಎಂಓಬಿ ಸಮುದಾಯ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ವರದರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಬಾಲ ಯೇಸು ದೇವಾಲಯದ ಧರ್ಮಗುರು ಫಾ.ಜಾನ್‍ಪೀಟರ್ ಅಧ್ಯಕ್ಷತೆ ವಹಿಸಿದ್ದರು.

ನಗರದ ಮಿಮ್ಸ್ ಆವರಣದಲ್ಲಿ ಪರಿಸರ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯು ಮಮತೆಯ ಮಡಿಲು-ನಿತ್ಯ ದಾಸೋಹದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.

ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಶೋಭ, ಮಿಮ್ಸ್‌ ಹಿರಿಯ ಶುಶ್ರೂಷಕಿ ಶಿವಮ್ಮ, ಅರುಣಾಕುಮಾರಿ ಕೆಂಪರಾಜು, ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಇದ್ದರು. ಹನಿಯಂಬಾಡಿ ರಾಮಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.