ಕಿಕ್ಕೇರಿ: ಯುವತಿ ಪ್ರೀತಿ ನಿರಾಕರಿಸಿದ ಕಾರಣ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕನೊಬ್ಬ ಭಾನುವಾರ ಪ್ರೇಮಿಗಳ ದಿನವೇ ಮೃತಪಟ್ಟಿರುವ ಘಟನೆ ಸಮೀಪದ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಂಜಯ್ಯ ಅವರ ಮಗ ಎಲ್.ಎಂ.ಸಚಿನ್ ಕುಮಾರ್ (20) ಮೃತಪಟ್ಟ ಯುವಕ. ಈತ ಕೆ.ಆರ್.ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಎ ಓದುತ್ತಿದ್ದ. ಇದೇ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಇಬ್ಬರು ಪಿಯುಸಿಯಿಂದಲೂ ಸ್ನೇಹಿತರಾಗಿದ್ದರು ಎನ್ನಲಾಗಿದೆ.
ಯುವತಿಯು ಸಚಿನ್ ಕುಮಾರ್ಗೆ ರಾಖಿ ಕಟ್ಟಲು ಮುಂದಾಗಿದ್ದಾರೆ. ಇದರಿಂದ ಮನನೊಂದು ಸಚಿನ್ ಕುಮಾರ್ ಫೆ.5ರಂದು ಕ್ರಿಮಿನಾಶಕ ಸೇವಿಸಿದ್ದ. ಅನಾರೋಗ್ಯದಿಂದ ಮಲಗಿದ್ದಾನೆ ಎಂದು ಮನೆಯವರು ಸುಮ್ಮನಾಗಿದ್ದರು. ಹೊಟ್ಟೆನೋವು ತಾಳಲಾರದೆ ಒದ್ದಾಡುತ್ತಿರುವಾಗ ಪೋಷಕರು ವಿಚಾರಿಸಿದ್ದಾರೆ, ಆಗ ವಿಷ ಸೇವಿಸಿರುವ ವಿಷಯ ಬೆಳಗಿಗೆ ಬಂದಿದೆ.
ಕೂಡಲೇ ಪೋಷಕರು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಆತ ಭಾನುವಾರ ಮೃತಪಟ್ಟಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.