ADVERTISEMENT

ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲು ಆದ್ಯತೆ

ನಂಜನಗೂಡು ಶಾಸಕ ಹರ್ಷವರ್ಧನ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 6:47 IST
Last Updated 19 ಮೇ 2018, 6:47 IST

ನಂಜನಗೂಡು: ‘ಕ್ಷೇತ್ರದಲ್ಲಿ ಶ್ರೀನಿವಾಸ ಪ್ರಸಾದ್ ಅವರು ಆರಂಭಿಸಿದ್ದ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದಿದ್ದು, ಅವುಗಳನ್ನು ಸಂಪೂರ್ಣವಾಗಿ ಪೂರೈಸಲು ಮೊದಲ ಆದ್ಯತೆ ನೀಡುತ್ತೇನೆ’ ಎಂದು ನೂತನ ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ನಗರದ ಮಹಾತ್ಮ ಗಾಂಧಿ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಶ್ರೀನಿವಾಸ ಪ್ರಸಾದ್ ಅವರು ಆರಂಭಿಸಿದ್ದ ಸಸ್ಯಕಾಶಿ, ಒಳಚರಂಡಿ ಯೋಜನೆ, ಶ್ರೀಕಂಠೇಶ್ವರ ದೇವಾಲ ಯದ ಎರಡನೇ ಹಂತದ ಅಭಿವೃದ್ಧಿ ಕಾರ್ಯ, ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿಗಳನ್ನು ಅವರ ಆಶಯದಂತೆ ಪೂರ್ಣಗೊಳಿಸಿ ಜನರ ಸೇವೆಗೆ ಅರ್ಪಿಸುತ್ತೇನೆ’ ಎಂದರು.

ADVERTISEMENT

‘ಕ್ಷೇತ್ರದಲ್ಲಿ  ಪ್ರಚಾರ ಆರಂಭಿಸಿದಾಗ ನನ್ನನ್ನು ಕೇವಲವಾಗಿ ಕಂಡು ಮೂದಲಿಸಿದವರಿಗೆ  ಇಲ್ಲಿನ ಜನ ನನ್ನನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಇಲ್ಲಿನ ಸಂಸದರು  ಬೆರಳಿಕೆಯಷ್ಟು ಕಾರ್ಯಕರ್ತರನ್ನು ಕಟ್ಟಿಕೊಂಡು, ಕ್ಷೇತ್ರದ ಬೀದಿಗಳ ಪರಿಚಯವಿಲ್ಲದ ಅವನೇನು ಮಾಡಬಲ್ಲ ಎಂದು ಸೊಕ್ಕಿನ ಮಾತುಗಳನ್ನು ಆಡಿದ್ದರು. ಅದಕ್ಕೆ ಈಗ ಉತ್ತರ ಸಿಕ್ಕಿದೆ’ ಎಂದು ಹೇಳಿದರು.

‘ಒಂದು ವರ್ಷದ ನಂತರ ನನ್ನ ಮಾವ ಶ್ರೀನಿವಾಸ ಪ್ರಸಾದ್ ಅವರ ಮುಖದಲ್ಲಿ ನಗೆಯನ್ನು ಕಂಡೆ. ನಾನೂ ರಾಜಕೀಯ ಹಿನ್ನೆಲೆಯಿಂದ ಬಂದವನು ಎಂಬುದನ್ನು ಸಂಸದರು ಅರಿತುಕೊಳ್ಳಬೇಕು. ರಾಜಕೀಯ ಕಲಿಸಿದ ಮನೆಯವರಿಗೆ ಪಾಠ ಹೇಳಿ ಕೊಡಲು ಬರಬೇಡಿ’ ಎಂದು ಎಚ್ಚರಿಕೆ ನೀಡಿದರು.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇ ಶ್ವರಿ ಕ್ಷೇತ್ರದಲ್ಲಿ 30 ಸಾವಿರ ಮತಗಳ ಅಂತರದಿಂದ ಸೋತ ನಂತರ ಶ್ರೀನಿವಾಸಪ್ರಸಾದ್ ಅವರ ಜನಪ್ರಿಯತೆಯ ಅರಿವಾಗಿರಬೇಕು’ ಎಂದು ವ್ಯಂಗ್ಯವಾಡಿದರು.

ಸಭೆಗೆ ಮೊದಲು ಶಾಸಕ ಬಿ.ಹರ್ಷವರ್ಧನ್ ಶ್ರೀಕಂಠೇಶ್ವರಸ್ವಾಮಿ ದೇವಾಯಲಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆದರು. ದೇವಾಲಯದವತಿಯಿಂದ ಅವರನ್ನು ಸ್ವಾಗತಿಸಲಾಯಿತು.

ನಂತರ ನೂರಾರು ಕಾರ್ತಕರ್ತ ರೊಂದಿಗೆ ನಗರದ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಸಭೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆಂಡಗಣ್ಣಪ್ಪ, ಮುಖಂಡರಾದ ಬಾಲಚಂದ್ರ,‌ ಸಿಂಧೂವಳ್ಳಿ ಕೆಂಪಣ್ಣ, ಬಿ.ಯೋಗೀಶ್, ಯು.ಎನ್.ಪದ್ಮನಾಭರಾವ್, ಸತ್ಯನಾರಾ ಯಣ ಕದಂ, ಯುವಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಂಠ, ಮಹೇಶ್, ಬಸವಣ್ಣ, ನಗರಸಭಾ ಸದಸ್ಯರಾದ ವಿಜಿಯಾಂಬಿಕೆ, ಮಂಗಳಾ, ಆನಂದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.