ADVERTISEMENT

ಆರೋಗ್ಯ ಕೇಂದ್ರ ಸಮರ್ಪಣೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 6:45 IST
Last Updated 3 ಜೂನ್ 2011, 6:45 IST

ಮೈಸೂರು: ಜಯನಗರದಲ್ಲಿ ನಿರ್ಮಾಣ ವಾಗಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸುವಂತೆ ಒತ್ತಾಯಿಸಿ ಜೆಡಿಎಸ್ ಕೆ.ಆರ್.ಕ್ಷೇತ್ರದ ಕಾರ್ಯಕರ್ತರು ಆರೋಗ್ಯ ಕೇಂದ್ರದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಕೆ.ಆರ್.ಕ್ಷೇತ್ರದ ವಾರ್ಡ್ ನಂ.8ರಲ್ಲಿರುವ ಜಯನಗರ ಬಡಾವಣೆ ಯಲ್ಲಿ ಕರ್ನಾಟಕ ಆರೊಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯಡಿಯಲ್ಲಿ ಬಡವರ ಅನುಕೂಲಕ್ಕಾಗಿ 30 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ ವಾಗಿ ವರ್ಷಗಳೇ ಕಳೆದಿದ್ದರೂ ಇದರ ಉದ್ಘಾಟನೆಯ ಬಗ್ಗೆ ಈ ಭಾಗದ ಶಾಸಕರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಎಸ್.ಎ.ರಾಮದಾಸ್ ಅವರು ಇತ್ತ ಗಮನ ಹರಿಸಿಲ್ಲ ಎಂದು ತಿಳಿಸಿದರು.

ಜಯನಗರ, ಚಿನ್ನಗಿರಿಕೊಪ್ಪಲು, ಕೆ.ಜಿ.ಕೊಪ್ಪಲಿನ ನಿವಾಸಿಗಳಿಗೆ ಆರೋಗ್ಯ ಕೇಂದ್ರದಿಂದ ಸಾಕಷ್ಟು ಅನುಕೂಲವಿದೆ. ಆದರೆ ಈ ಸಮುದಾಯ ಆರೋಗ್ಯ ಕೇಂದ್ರವನ್ನು ಉಪಯೋಗಕ್ಕೆ ಬಾರದಂತೆ ಮಾಡಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಶಾಸಕರು ತಮ್ಮ ಕ್ಷೇತ್ರದಲ್ಲೇ ಇರುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು  ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಜ್ಯದ ವಿಕ್ಟೋರಿಯ, ಕೆ.ಆರ್. ಆಸ್ಪತ್ರೆ, ಬೌರಿಂಗ್ ಇವೇ ಮೊದಲಾದ ಹಲವಾರು ಸರ್ಕಾರಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪ್ರಚಾರ ಪಡೆಯುತ್ತಿರುವ ಸಚಿವರಿಗೆ ತಮ್ಮದೇ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆಯತ್ತ ಗಮನ ಹರಿಸುತ್ತಿಲ್ಲ.  ಈ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಆರೋಗ್ಯ ಕೇಂದ್ರಕ್ಕೆ ವೈದ್ಯರು ಹಾಗೂ ಸೂಕ್ತ ಸಿಬ್ಬಂದಿ ಮತ್ತು ಪರಿಕರಗಳನ್ನು ಒದಗಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಕೆ.ಆರ್. ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಪ್ರಕಾಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರ ಘಟಕ ಅಧ್ಯಕ್ಷ ರಾಜಣ್ಣ, ಕಾರ್ಯಾಧ್ಯಕ್ಷ ಎಸ್‌ಬಿಎಂ ಮಂಜು, ಮುಖಂಡರಾದ ಟಿ.ನಾರಾಯಣಗೌಡ, ಚನ್ನಪ್ಪ, ಎಸ್.ನಾಗರಾಜು, ಮುದ್ದುರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.