ADVERTISEMENT

ಎಪಿಎಂಸಿ: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 6:35 IST
Last Updated 11 ಜೂನ್ 2011, 6:35 IST

ಸಾಲಿಗ್ರಾಮ : ಎಪಿಎಂಸಿ ಚುನಾವಣೆ ಎರಡು ದಿನ ಬಾಕಿ ಇರುವ ಹಿನ್ನೆಲೆ ಯಲ್ಲಿ ಸಾಲಿಗ್ರಾಮ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಯು ಕೂಡಾ ಹಿಂದೆ ಬಿದ್ದಿಲ್ಲ.

ಎಪಿಎಂಸಿ ಚುನಾವಣೆಯಲ್ಲಿ ಬಹುತೇಕ ರೈತ ಸಮುದಾಯವೇ ಮತದಾರರಾಗಿದ್ದು, ಬೆಳಿಗ್ಗೆ ಅಥವಾ ರಾತ್ರಿ ವೇಳೆ ಮಾತ್ರ ಮನೆಗಳಲ್ಲಿ ಸಿಗುತ್ತಾರೆ ಎಂಬುದನ್ನು ತಿಳಿದಿರುವ ಅಭ್ಯರ್ಥಿಗಳು ಜಮೀನಿನ್ಲ್ಲಲೇ ಕೆಲಸ ಮಾಡುತ್ತಿದ್ದರೂ ಸರಿ `ಅಣ್ಣ ನನ್ನ ಚಿಹ್ನೆ ಇದು ದಯಮಾಡಿ ಓಟು ಹಾಕಣ್ಣ~ ಎಂದು ಓಲೈಸುತ್ತಿದ್ದಾರೆ.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ ಮತ್ತು ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಿವಕುಮಾರ್, ದೊಡ್ಡಸ್ವಾಮಿಗೌಡ, ಡಿ.ರವಿಶಂಕರ್, ಎಸ್.ಬಿ.ಮಲ್ಲೇಗೌಡ, ಕಾಳಿಂಗರಾಜ್ ಅವರು ಶತಾಯ ಗತಾಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಲರಾಮೇಗೌಡ ಅವರನ್ನು ಗೆಲ್ಲಿಸಬೇಕೆಂದು ವಿವಿಧ ಗ್ರಾಮಗಳಿಗೆ ತೆರಳಿ ಬಿಜೆಪಿ ಸರ್ಕಾರ ರೈತರ ಪರವಾಗಿ ಮಾಡುತ್ತಿರುವ   ಅಭಿವೃದ್ಧಿ ಕಾರ್ಯಗಳನ್ನು ರೈತ   ಸಮುದಾಯಕ್ಕೆ ಮನವರಿಕೆ ಮಾಡುತ್ತಿದೆ. ಜತೆಗೆ ತಾಲ್ಲೂಕಿನಲ್ಲಿ ಎಪಿಎಂಸಿ ಅನ್ನು ಬಿಜೆಪಿ ತನ್ನ ಹಿಡಿತಕ್ಕೆ ತೆಗೆದು ಕೊಳ್ಳುತ್ತದೆ. ಆದ್ದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ಮತವನ್ನು ನೀಡುವ ಮೂಲಕ ತಾಲ್ಲೂಕಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕು ಎಂದು ಮನವಿ       ಮಾಡುತ್ತಿದ್ದಾರೆ. ಜೆಡಿಎಸ್ ಭದ್ರಕೋಟೆ ಎಂದೇ ತಾಲ್ಲೂಕಿನಲ್ಲಿ    ಗುರುತಿಸಿಕೊಂಡಿರುವ ಸಾಲಿಗ್ರಾಮ ಎಪಿಎಂಸಿ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕುಪ್ಪಳ್ಳಿ ಸೋಮು ಅವರನ್ನು ಗೆಲ್ಲಿಸಬೇಕು ಎಂದು ಎಸ್.ಆರ್.ರಾಮೇಗೌಡ, ಮೆಡಿಕಲ್‌ರಾಜಣ್ಣ, ಎಸ್.ಎಸ್.ರಾಮಕೃಷ್ಣೇಗೌಡ, ಎಸ್.ಎಂ.ಶ್ರೀನಿವಾಸ್‌ಗೌಡ, ಎಸ್.ಎಂ.ಸೋಮಣ್ಣ, ಎಸ್.ಕೆ.ಮಧುಚಂದ್ರ, ಎಸ್.ವಿ.ನಟರಾಜ್ ಅವರುಗಳು ಶಾಸಕ ಸಾ.ರಾ.ಮಹೇಶ್ ಕ್ಷೇತ್ರದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. 

 ಕಾಂಗ್ರೆಸ್‌ಗೆ ಗೌಪ್ಯ ಮತದಾರರು ಇದ್ದಾರೆ ಎಂಬುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ತೋಟದ ಮಂಜುನಾಥ್ ಅವರನ್ನು ಗೆಲ್ಲಿಸಲು ಪಕ್ಷದ ಮುಖಂಡರಾದ ಎಸ್.ಪಿ.ತಮ್ಮಯ್ಯ, ಹನುಮಾನ್‌ಬಾಬು, ಪಟೇಲ್ ಆನಂದ್, ಗುಣ ಪಾಲ್‌ಜೈನ್,      ನರಸಿಂಹಮೂರ್ತಿ, ಅಬ್ದುಲ್‌ವಾಭ್,    ಶೇಖರ್‌ಗೌಡ ಇಲ್ಲದ ಕಸರತ್ತು       ಮಾಡುತ್ತಿದ್ದಾರೆ. ಮೂರು ಪಕ್ಷಗಳ ಅಭ್ಯರ್ಥಿಗಳ ಬಿರುಸಿನ ಪ್ರಚಾರದ ನಡುವೆ ಸ್ವತಂತ್ರ ಅಭ್ಯರ್ಥಿ ರಾಂಪುರ  ಕ ಲಕ್ಷ್ಮಣ್ ಅವರು ಏಕಾಂಗಿಯಾಗಿ ಪ್ರಚಾರ ಮಾಡುತ್ತಿದ್ದು, ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ನಾನು ನಿರ್ಣಾಯಕನಾಗುತ್ತೇನೆ. ನೀವು ಆಶೀರ್ವಾದ ಮಾಡಿದರೆ ನೀವು ನೀಡಿದ ಅಧಿಕಾರವನ್ನು ನಿಮ್ಮ ಏಳಿಗೆಗೆ ಮುಡುಪಾಗಿಡುವೆ ಎಂದು ಪರಿ ಪರಿಯಾಗಿ ಮನವಿ ಮಾಡುತ್ತಿದ್ದಾರೆ.

 ತಂಬಾಕು, ಬತ್ತದ ಬೆಳೆಯನ್ನು ನಂಬಿರುವ ಈ ಹೋಬಳಿ ವ್ಯಾಪ್ತಿಯ ರೈತರಿಗೆ ಪ್ರತಿ ವರ್ಷ ರಸ ಗೊಬ್ಬರಗಳ ಕೃತಕ ಅಭಾವ ಉಂಟಾದಾಗ ಇದನ್ನು ಬಗೆಹರಿಸಲು ಇಲ್ಲಿಯ ತನಕ ಎಪಿಎಂಸಿ ನಿರ್ದೇಶಕರು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿರುವಾಗ ರೈತ ಸಮುದಾಯ ಯಾವ ಅಭ್ಯರ್ಥಿಗೆ ವಿಜಯ ಮಾಲೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.