ADVERTISEMENT

ಕಬಿನಿ ಭರ್ತಿ: ಪ್ರವಾಹ ಮುನ್ನೆಚ್ಚರಿಕೆ

ಹೆಚ್ಚಿದ ಒಳಹರಿವು; ಜಲಾಶಯದಿಂದ ನದಿಗೆ ನೀರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 13:28 IST
Last Updated 15 ಜೂನ್ 2018, 13:28 IST

ಮೈಸೂರು: ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟದಿಂದಾಗಿ ಕಬಿನಿ ಜಲಾಶಯವು ಗರಿಷ್ಠ ಮಟ್ಟ ತಲುಪಿದ್ದು, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

ಒಳಹರಿವು ಸತತವಾಗಿ ಹೆಚ್ಚುತ್ತಿದ್ದು, ಜಲಾಶಯದಿಂದ ಗುರುವಾರ ಸುಮಾರು 15,000 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಯಿತು. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಸಂದರ್ಭದಲ್ಲಿ ಮತ್ತಷ್ಟು ನೀರನ್ನು ಕಸ್ಟ್‌ ಗೇಟ್‌ಗಳ ಮೂಲಕ ಹೊರಬಿಡುವ ಸಾಧ್ಯತೆ ಇದೆ.

ಹೀಗಾಗಿ, ಕಬಿನಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಬಿನಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್‌ ಸಿ.ಪಿ.ಜಗದೀಶ್ ಮುನ್ನೆಚ್ಚರಿಕೆ ನೀಡಿದ್ದಾರೆ.

ADVERTISEMENT

2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,281 ಅಡಿ ನೀರು ಸಂಗ್ರಹವಾಗಿದೆ. 30 ಸಾವಿರ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಎರಡು ದಿನಗಳಲ್ಲಿ 10 ಅಡಿ ಏರಿಕೆ ಕಂಡಿದೆ. ಜಲಾಶಯದ ಹಿನ್ನೀರಿನ ಪ್ರದೇಶ ಮತ್ತು ಕೇರಳದ ವೈನಾಡಿನಲ್ಲಿ ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವಿನಲ್ಲಿ ಹೆಚ್ಚಳವಾಗಿದೆ.

ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 92.30 ಅಡಿ ತಲುಪಿದೆ. ಒಳಹರಿವು ಗಣನೀಯ ಏರಿಕೆ ಕಂಡಿದ್ದು, ಗುರುವಾರ 26,395 ಕ್ಯುಸೆಕ್‌ ಇತ್ತು. ಕಳೆದ ಮೂರು ದಿನಗಳಲ್ಲಿ 12 ಅಡಿ ನೀರು ಹರಿದು ಬಂದಿದೆ. ಹೀಗೆ, ಮಳೆ ಮುಂದುವರಿದರೆ ಈ ಬಾರಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಹಾರಂಗಿ ಜಲಾಶಯ ಒಂದೇ ದಿನದಲ್ಲಿ ಮೂರೂವರೆ ಅಡಿ ಏರಿಕೆ ಕಂಡಿದ್ದು, ಭರ್ತಿಯಾಗಲು 36 ಅಡಿಗಳಷ್ಟೇ ಬಾಕಿ ಇದೆ.

ಹೇಮಾವತಿ ಜಲಾಶಯಕ್ಕೆ 37,479 ಕ್ಯುಸೆಕ್ ನೀರು ಹರಿದುಬಂದಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ ಒಂದೇ ದಿನದಲ್ಲಿ ಆರು ಅಡಿಗಳಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.