ADVERTISEMENT

ಕೆಸರುಮಯ ರಸ್ತೆಗೆ ಕಾಯಕಲ್ಪ ಎಂದು!

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 9:50 IST
Last Updated 16 ಅಕ್ಟೋಬರ್ 2011, 9:50 IST

ತಿ.ನರಸೀಪುರ: ಪಟ್ಟಣದ ಪ್ರಮುಖ ವಾಣಿಜ್ಯ ರಸ್ತೆಗಳಾದ ಲಿಂಕ್ ರಸ್ತೆ ಹಾಗೂ ಮಾರುಕಟ್ಟೆ ರಸ್ತೆಗಳ ಹಳ್ಳ ಮುಚ್ಚಲು ಹಾಕಿದ ಮಣ್ಣು ಮಳೆಯಿಂದ ಕೆಸರಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. 

   ಒಳ ಚರಂಡಿ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಎರಡು ರಸ್ತೆಗಳ ದುರಸ್ತಿ ವಿಳಂಬವಾಗಿದ್ದು, ಈಚೆಗೆ ತಾತ್ಕಾಲಿಕವಾಗಿ ಹಳ್ಳಕೊಳ್ಳ ಮುಚ್ಚಲು ಗ್ರಾವೆಲ್ ಮಣ್ಣು ಸುರಿಯಲಾಗಿತ್ತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಆ ಮಣ್ಣು ಕೆಸರಿನಂತೆ ಹರಡಿ ಈಗ ನಾಟಿ ಜಮೀನಿನಂತಾಗಿದೆ. ದ್ವಿಚಕ್ರ ವಾಹನ ಸಂಚರಿಸುವಾಗ ಆಯ ತಪ್ಪುತ್ತಿವೆ. ಪಾದಾಚಾರಿಗಳ ಸಂಚಾರ ಹೇಳತೀರದಾಗಿದೆ.

ಅನೇಕ ವರ್ಷಗಳಿಂದ ಈ ಎರಡು ಪ್ರಮುಖ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮಕೈಗೊಂಡಿಲ್ಲ. ರಸ್ತೆಯುದ್ದಕ್ಕೂ ಗುಂಡಿ ಬಿದ್ದಿವೆ.

ಮಳೆ ಬಂದರೆ ನೀರು ನಿಂತು ವಾಹನ ಸಂಚರಿಸುವಾಗ ಅಕ್ಕ ಪಕ್ಕದಲ್ಲಿ ಓಡಾಡುವ ಜನರ ಮೇಲೆ ಕೆಸರು ಚೆಲ್ಲುತ್ತಿದೆ. ಇದರ ಜತೆಯಲ್ಲಿ ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಕೆಸರಿನ ರಸ್ತೆಯಲ್ಲೇ ನಾಗರಿಕರು ಓಡಾಡಬೇಕಿದೆ.

`ಒಳಚರಂಡಿ ಕಾಮಗಾರಿ ಆರಂಭವಾಗಿದ್ದು, ಅದು ಪೂರ್ಣಗೊಂಡ ನಂತರ ಈ ಎರಡು ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು~ ಎನ್ನುತ್ತಾರೆ ಅಧಿಕಾರಿಗಳು.

ಗ್ರಾಮೀಣ ದಸರಾ ವೇಳೆ ರಸ್ತೆ ಗುಂಡಿ ಮುಚ್ಚಲು ಗ್ರಾವೆಲ್ ಮಣ್ಣು ಹಾಕಿಸಲಾಯಿತು. ಅದಕ್ಕೆ ಜಲ್ಲಿ ಹಾಕಿಸಿ ಮುಚ್ಚಿಸಲಾಗಿದೆ. ನಂತರ ಮಣ್ಣು ಹಾಕಬೇಕಿತ್ತು.  ಆದರೆ, ಬರೀಮಣ್ಣು ಹಾಕಿದ್ದರಿಂದ ಶುಕ್ರವಾರ ಬಿದ್ದ       ಭಾರಿ ಮಳೆಯಿಂದಾಗಿ ಈ ಎರಡು ರಸ್ತೆಗಳು ಸಂಚರಿಸಲು ಆಗದ ಸ್ಥಿತಿ ಇದೆ~ ಎಂದು ಸಾರ್ವಜನಿಕರು            ಆರೋಪಿಸಿದ್ದಾರೆ.

ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.