ADVERTISEMENT

ಗಡುವು: ಡಿ.ಸಿ, ಎಸ್ಪಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 6:00 IST
Last Updated 25 ಫೆಬ್ರುವರಿ 2012, 6:00 IST

ಮೈಸೂರು: `ತಿ.ನರಸೀಪುರ, ವರುಣಾ ಹೋಬಳಿ ಯಲ್ಲಿ ವ್ಯಾಪಕವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆದಿದ್ದು, ಒಂದು ವಾರದಲ್ಲಿ ಅದನ್ನು ತಡೆಗಟ್ಟ ಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು~ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

`ಮರಳು ಮಾಫಿಯಾ, ಅಕ್ರಮ ಸಾಗಣೆಯನ್ನು ತಡೆಗಟ್ಟಬೇಕು ಎಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸ ಲಾಗಿತ್ತು. ಇದಕ್ಕೆ ಸ್ಪಂದಿಸಿದ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿ ಕಾರಿ ನೇತೃತ್ವದಲ್ಲಿ ಸಮಿತಿಯನ್ನು ನೇಮಕ ಮಾಡಿದ್ದರು. ಆದರೆ, ತಿ.ನರಸೀಪುರ ಮತ್ತು ವರುಣಾ ಹೋಬಳಿಯಿಂದ ಬೆಂಗಳೂರು-ಮೈಸೂರಿಗೆ ನಿತ್ಯವೂ ಅಕ್ರಮ ಮರಳು ಸಾಗಣೆಯಾಗುತ್ತಿದೆ. ಇದನ್ನು ತಡೆ ಗಟ್ಟಬೇಕಾದ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ~ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

`ಅಕ್ರಮ ಮರಳು ಸಾಗಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ನಿತ್ಯ 10 ಲಕ್ಷ ರೂಪಾಯಿ ನಷ್ಟವಾಗುತ್ತಿದೆ. ಸೇತುವೆ, ದೇವಸ್ಥಾನದ ಎರಡೂ ಬದಿ 1 ಕಿ.ಮೀ ವ್ಯಾಪ್ತಿಯಲ್ಲಿ ಮರಳು ತೆಗೆಯಬಾರದು ಎಂಬ ನಿಯಮವಿದ್ದರೂ ನಿರಂತರ ವಾಗಿ ಮರಳು ತೆಗೆಯಲಾಗುತ್ತಿದೆ. ಇದರಲ್ಲಿ ಪೊಲೀಸ್, ಕಂದಾಯ, ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ನಿದ್ದೆ ಮಾಡುತ್ತಿದೆ~ ಎಂದು ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದರು.

ಮಚ್ಚು..ಲಾಂಗು..
`ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಿಸುವ ವರು ಲಾರಿಯಲ್ಲಿ ಮಚ್ಚು, ಲಾಂಗು ಇಟ್ಟುಕೊಂಡಿ ರುವುದು ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದರಿಂದ ಇಂತಹ ಘಟನೆ ನಡೆಯುತ್ತಿವೆ. ಅಧಿಕಾರಿಗಳ ಕುಮ್ಮಕ್ಕು ಇಲ್ಲದೆ ಅಕ್ರಮ ಮರಳು ಸಾಗಣೆ ಸಾಧ್ಯವಿಲ್ಲ. ಆದ್ದರಿಂದ ಒಂದು ವಾರದಲ್ಲಿ ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮುಂದಾಗಬೇಕು. ಇಲ್ಲವಾದರೆ 10 ಸಾವಿರ ಬೆಂಬಲಿಗರೊಂದಿಗೆ ಮುತ್ತಿಗೆ ಹಾಕಲಾಗು ವುದು~ ಎಂದರು.

`ಕಳೆದ ಒಂದು ವರ್ಷದಿಂದ ವಿಧವಾ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಹಾಗೂ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆಯಾಗಿಲ್ಲ. ಫೆಬ್ರುವರಿ ಮುಗಿಯುತ್ತ ಬಂದರೂ ಬಜೆಟ್ ಪೂರ್ವಭಾವಿ ಸಭೆ ಕರೆದಿಲ್ಲ. ರಾಜ್ಯದ 123 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ.

ಹೀಗಿರುವಾಗ ಇದನ್ನು ಬಡವರ ಸರ್ಕಾರ ಎಂದು ಹೇಗೆ ಕರೆಯವುದು. ಆದ್ದರಿಂದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ರಾಜೀನಾಮೆ ಸಲ್ಲಿಸಿ ಮನೆಗೆ ಹೋಗಬೇಕು~ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಕಾಂಗ್ರೆಸ್ ಪಕ್ಷದವರೇ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರಲ್ಲ~ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಯಾವ ಪಕ್ಷದವರೇ ಆಗಿರಲಿ, ಅವರ ಮೇಲೆ ಕ್ರಮ ಜರುಗಿಸಬೇಕು. ಮಚ್ಚು, ಲಾಂಗು ಬಳಸಿ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾದರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು~ ಎಂದರು.

ಶಾಸಕ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, `ತಿ.ನರಸೀಪುರ ತಾಲ್ಲೂಕಿನ ದೇವಸ್ಥಾನ ಹಾಗೂ ಸೇತುವೆ ಬಳಿ ನಿರಾತಂಕವಾಗಿ ಅಕ್ರಮ ಮರಳು ಸಂಗ್ರಹಿಸಲಾಗುತ್ತಿದೆ. ಮರಳು ಸಹಕಾರ ಸಂಘಗಳಿಗೆ ತಾತ್ಕಾಲಿಕ ಟೆಂಡರ್ ನೀಡಲಾಗಿದ್ದು, ಜ. 31ಕ್ಕೆ ಅವಧಿ ಮುಕ್ತಾಯವಾಗಿದೆ.
 
ಆದಾಗ್ಯೂ, ಅವರು ಪ್ರತಿ ದಿನ ಮರಳು ಸಾಗಣೆ ಮಾಡುತ್ತಿದಾರೆ. ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ~ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಎಚ್. ಎ.ವೆಂಕಟೇಶ್, ಮಾಜಿ ಜಿ.ಪಂ. ಅಧ್ಯಕ್ಷ ಮರೀಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.