ADVERTISEMENT

ಗಿರಿಜನರ ವಸತಿ ಯೋಜನೆಗೆ ಇಂದು ಸಚಿವ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 8:30 IST
Last Updated 18 ಅಕ್ಟೋಬರ್ 2011, 8:30 IST

ಹುಣಸೂರು : 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಅಂದಾಜು ರೂ. 1 ಲಕ್ಷ ವೆಚ್ಚದಲ್ಲಿ ಮೂಲ ಗಿರಿಜನರಿಗೆ ವಸತಿ ನಿರ್ಮಿಸುವ ಯೋಜನೆಗೆ ಅ.18ರಂದು ಸಚಿವ ರಾಮದಾಸ್ ಚಾಲನೆ ನೀಡಲಿದ್ದಾರೆ.

ಮೂಲ ಗಿರಿಜನರಿಗೆ ಶಾಶ್ವತ ನೆಲೆ ಒದಗಿಸಲು ಪ್ರಥಮ ಹಂತದಲ್ಲಿ ರೂ. 55 ಕೋಟಿ ವೆಚ್ಚದಲ್ಲಿ ಒಟ್ಟು 2963 ಮನೆಗಳನ್ನು ನಿರ್ಮಿಸಲಾಗುತ್ತಿದೆ.  ಮೂಲಭೂತ ಸವಲತ್ತು ಕಲ್ಪಿಸುವ ದೃಷ್ಠಿಯಿಂದ  ಅಂದಿನ ಮೈಸೂರು ಡಿಸಿ ಸೆಲ್ವಕುಮಾರ್, ಯೋಜನಾ ಆಯೋ ಗದ ಮುಖ್ಯ ಸಲಹೆಗಾರ ಡಾ.ಸಿರಾಜುದ್ದಿನ್ ಮತ್ತು ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆ ನಿರ್ದೇಶಕ  ಎಂ.ಬಿ.ಪ್ರಭು ತಂಡ  2006ರಲ್ಲಿ ಯೋಜನಾ ಆಯೋಗದ ಆಹ್ವಾನದ ಮೇಲೆ ಯೋಜನೆ ಸಿದ್ದಪಡಿಸಿದ್ದರು.
 
ಯೋಜನೆಯಲ್ಲಿ ಗಿರಿಜನರಿಗೆ ಶಾಶ್ವತ ಸೌಲಭ್ಯ  ಕಲ್ಪಿಸಲು ಮನೆ, ಶುದ್ಧ ಕುಡಿಯುವ ನೀರು   ಸೇರಿದಂತೆ ಗುಣಮಟ್ಟದ ಜೀವನ ನಿರ್ವಹಿಸಲು ಜಮೀನು ಅಭಿವೃದ್ಧಿ ಮತ್ತು  ಇತರೆ ಅರ್ಥಿಕ ಉನ್ನತಿ ಕಾರ್ಯಕ್ರಮಗಳನ್ನು ಯೋಜನೆಯಲ್ಲಿ ಸೇರಿಸಲಾಗಿದೆ.

ಯೋಜನೆಯ ಪ್ರಥಮ ಕಂತಿನಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲ್ಲೂಕಿಗೆ  2076 ಸಿಂಹ ಪಾಲು  ದೊರಕಿದ್ದು, ನಂತರದಲ್ಲಿ ಹುಣಸೂರಿಗೆ 712, ಪಿರಿಯಾಪಟ್ಟಣ 95  ಮತ್ತು ನಂಜನಗೂಡಿಗೆ 80 ಮನೆ ಮಂಜೂರಾಗಿದೆ. 

20*15 ಅಳತೆಯಲ್ಲಿ ನಿರ್ಮಿಸಲಿರುವ ಮನೆಯಲ್ಲಿ ವಿಶಾಲವಾದ ಸಭಾಂಗಣ, ಅಡುಗೆ ಮನೆ, ಸ್ನಾನದ ಗೃಹ ಮತ್ತು ಶೌಚಾಲಯದ ವ್ಯವಸ್ಥೆ ಹೊಂದಿದೆ. ಮನೆಯ ವಿನ್ಯಾಸವನ್ನು ಮೈಸೂರಿನ ನಿರ್ಮಿತಿ ಕೇಂದ್ರ ಸಿದ್ದಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.