ಮೈಸೂರು: ಜನರೊಂದಿಗೆ ಸಹಜ ಬೆರೆಯುವಿಕೆಯೇ ಬೇಂದ್ರೆ ಅವರ ಕವಿತೆಗಳ ಸತ್ವವಾಗಿತ್ತು ಎಂದು ಧಾರವಾಡದ ಬೇಂದ್ರೆ ಟ್ರಸ್ಟಿನ ಸಂಸ್ಥಾಪಕ ಸದಸ್ಯ ಡಾ.ಶ್ಯಾಮಸುಂದರ ಬಿದರಕುಂದಿ ಹೇಳಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕವಿತೆಗಳಿಗಾಗಿಯೇ ಆರಂಭವಾಗಿದ್ದ ‘ಪ್ರಭಾತ’ ಪತ್ರಿಕೆಯಲ್ಲಿ ಅವರ ಕವಿತೆಗಳು ಪ್ರಕಟಗೊಳ್ಳುತ್ತಿದ್ದವು. ‘ತುತ್ತೂರಿ’ ಪ್ರಕಟವಾದ ಮೊದಲ ಕವಿತೆಯಾಗಿದ್ದು, 1920ರಲ್ಲಿ ಕವಿತೆಗಳ ಕುರಿತ ಚರ್ಚೆಗಾಗಿಯೇ ಧಾರವಾಡದಲ್ಲಿ ಗೆಳೆಯರ ಬಳಗವನ್ನು ಕಟ್ಟುವ ಮೂಲಕ ಇತರರಿಗೂ ಪ್ರೇರಕ ಶಕ್ತಿಯಾಗಿದ್ದರು ಎಂದು ತಿಳಿಸಿದರು.
ರವೀಂದ್ರನಾಥ ಠ್ಯಾಗೂರ್, ಖಲೀಲ್ ಗಿಬ್ರಾನ್, ಅರವಿಂದರು ಮತ್ತು ಎ.ಈ.ಎಂಬ ಐರಿಷ್ ಕವಿ ಬೇಂದ್ರೆಯವರಿಗೆ ಪ್ರಭಾವ ಬೀರಿದ ಚತುರ್ಮುಖ ಗುರುಗಳಾಗಿದ್ದಾರೆ. ಭೂಮಿ, ವಿಶ್ವ, ಭರತ, ಕನ್ನಡ ಮತ್ತು ಹೆತ್ತ ತಾಯಿಯ ಕರುಣದ ಶಿಶು ತಾನು ಎಂದು ಹೇಳಿಕೊಳ್ಳುವ ಬೇಂದ್ರೆ ಅವರಿಗೆ ಪ್ರೀತಿ ಮತ್ತು ಭಕ್ತಿಯೇ ಕವಿತೆಯ ಮುಖ್ಯ ಶಕ್ತಿಯಾಗಿತ್ತು ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ‘ಕುವೆಂಪು ಅವರದ್ದು ಆನೆ ಮಾರ್ಗವಾದರೆ, ಬೇಂದ್ರೆಯವರದ್ದು ಜಿಂಕೆಯ ಮಾರ್ಗವಾಗಿತ್ತು. ಕುವೆಂಪು ಇಡಿತನದಿಂದ ಬಿಡಿತನಕ್ಕೆ ಬಂದರೆ, ಬೇಂದ್ರೆ ಬಿಡಿತನದಿಂದ ಮಹತ್ತಿಗೇರಿದರು. ಇವರಿಬ್ಬರು ಕನ್ನಡ ಸಾರಸ್ವತ ಲೋಕದ ಅಪ್ರತಿಮರು’ ಎಂದರು.
ಪ್ರಾಧ್ಯಾಪಕರಾದ ಡಾ. ವಿಜಯಕುಮಾರಿ ಎಸ್. ಕರಿಕಲ್, ಡಾ.ಎನ್.ಕೆ.ಲೋಲಾಕ್ಷಿ, ಡಾ.ಎಸ್.ಡಿ.ಶಶಿಕಲಾ, ಡಾ.ನೀಲಗಿರಿ ಎಂ. ತಳವಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.