ADVERTISEMENT

ಜೂ.5ರಿಂದ ಏಕವ್ಯಕ್ತಿ ಯಕ್ಷಗಾನ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 6:45 IST
Last Updated 3 ಜೂನ್ 2011, 6:45 IST

ಮೈಸೂರು: ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾರ್ಜನೆಗಾಗಿ `ಅಕ್ಷರ ದೀಕ್ಷೆಯಲ್ಲಿ ಯಕ್ಷ ಸಿರಿ~ ಕಾರ್ಯಕ್ರಮ ದಡಿ ಜೂ.5ರಿಂದ 11ರವರೆಗೆ ಮಂಟಪ ಪ್ರಭಾಕರ ಉಪಾಧ್ಯ ಅವರ `ಏಕವ್ಯಕ್ತಿ ಯಕ್ಷಗಾನ ಸಪ್ತಾಹ~ ಆಯೋಜಿಸ ಲಾಗಿದೆ ಎಂದು ಮೈಸೂರಿನ ಶ್ರೀ ಗುರು ನರಸಿಂಹ ಮಿತ್ರ ಮಂಡಲಿ ಅಧ್ಯಕ್ಷ ಬಿ.ಸುರೇಶ್ ಎಂ. ಹೊಳ್ಳ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಜೂ.5ರಂದು ಸಂಜೆ 5.45ಕ್ಕೆ ನಗರದ ಜಗನ್ಮೋಹನ ಅರಮನೆ ಸಭಾಂಗಣ ದಲ್ಲಿ ಯಕ್ಷಗಾನ ಸಪ್ತಾಹದ ಉದ್ಘಾಟನೆ ನಡೆಯಲಿದೆ. ಅತಿಥಿಗಳಾಗಿ ನಟನ ನಿರ್ದೇಶಕ ಮಂಡ್ಯ ರಮೇಶ್, ಪರ್ತಕರ್ತ ರವೀಂದ್ರಭಟ್ಟ ಭಾಗವಹಿಸಲಿದ್ದಾರೆ. ಪ್ರತಿ ದಿನ ಸಂಜೆ 6.30ಕ್ಕೆ ಏಕವ್ಯಕ್ತಿ ಯಕ್ಷಗಾನ ಕಾರ್ಯಕ್ರಮ ಆರಂಭವಾಗುತ್ತದೆ ಎಂದರು.

ಜೂ.5ರಂದು ಯಕ್ಷ ದರ್ಪಣ, ಜೂ.6-ಶ್ರೀ ಕೃಷ್ಣಾರ್ಪಣ, ಜೂ.7- ಜಾನಕೀ ಜೀವನ, ಜೂ.8-ಮಣಿಪುರದ ಮಾನಿನಿ, ಜೂ.9-ಯಕ್ಷಕದಂಬ, ಜೂ.10-ಭಾಮಿನಿ, ಜೂ.11- ವೇಣುವಿಸರ್ಜನ ಕಾರ್ಯಕ್ರಮ ನಡೆಯಲಿದೆ.
 
ಜೂ.11ರ ಸಂಜೆ 7.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ನಿರ್ದೇಶಕ ನಾಟ್ಯಾಚಾರ‌್ಯ ಪ್ರೊ.ಕೆ.ರಾಮಮೂರ್ತಿ ರಾವ್ ಹಾಗೂ ಸಂಗೀತ ವಿಶ್ವ ವಿದ್ಯಾಲಯ ಪ್ರಸಾರಾಂಗದ ಗೌರವ ನಿರ್ದೇಶಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಆಗಮಿಸಲಿದ್ದಾರೆ ಎಂದರು.

ಮಂಟಪ ಪ್ರಭಾಕರ ಉಪಾಧ್ಯ ಮಾತನಾಡಿ, ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದೇನೆ.  ಸೀತೆ, ಅಂಬೆ, ಮೋಹಿನಿ, ಚಿತ್ರಾಕ್ಷಿ, ಮೇನಕೆ, ವಿಜಯಶ್ರೀ, ಪೂತನಿಗಳಂಥ ಸ್ತ್ರೀ ಪಾತ್ರ ಅಭಿನಯಗಳು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಏಕಪಾತ್ರಾಭಿನಯ ಅಲ್ಲ,  ಏಕವ್ಯಕ್ತಿ ಪ್ರದರ್ಶನವಾಗಿದೆ ಎಂದು ಹೇಳಿದರು.

ಯಕ್ಷಗಾನದ ನಿರ್ದೇಶನ, ರಚನೆ ಮತ್ತು ಪರಿಕಲ್ಪನೆ ಶತಾವಧಾನಿ ಡಾ.ಆರ್.ಗಣೇಶ್ ಅವರದಾಗಿದ್ದು, ವಿದ್ವಾನ್ ಗಣಪತಿ ಭಟ್ಟ (ಭಾಗವತಿಕೆ), ಎ.ಪಿ.ಫಾಟಕ್ (ಮದ್ದಳೆ), ಕೃಷ್ಣಯಾಜಿ ಇಡಗುಂಜಿ (ಚಂಡೆ), ರಾಜಶೇಖರ ಹಂದೆ (ಸಹಕಾರ) ಇವರ ಸಹಯೋಗ ದಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. 

ಪ್ರವೇಶ ಉಚಿತವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಭಾಗವಹಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.